ಟ್ರಿನ್ ಟ್ರಿನ್ ...

ಅದೆಷ್ಟು ದಿನದಿಂದ ಅದೊಂದು ಫೋನ್ ಗಾಗಿ ಕಾಯ್ತಾ ಇದ್ನೋ ಗೊತ್ತಿಲ್ಲ. ಮಹಾ ನಗರದಲ್ಲಿ ಒಂಟಿ ರೂಮು ಮಾಡಿ ಒಂಟಿಯಾಗಿದ್ದ ದಿನದಿಂದ ಅದೊಂದು ಫೋನ್ ಗಾಗಿ ಕಾಯ್ತಾ ಇದ್ದ. ಘಳಿಗೆಗೊಮ್ಮೆ ಫೋನ್ ನೋಡಿ ಬಡಬಡಿಸ್ಥ ಇದ್ದ. ಯಾರೋ ಕೇಳ ಬೇಕಾದ್ದೊಂದು ಯಾರಿಗೂ ಕೇಳದೆ ಅಲೆ ಅಲೆಯಾಗಿ ಹೋಗಿ ಗಾಳಿಯಲ್ಲಿ ವಿಲೀನವಾಗುತ್ತಿತ್ತು.  ಅಂತರಾಳದ ಮಾತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ವು. ಸತ್ತ ಪ್ರತಿ ಮಾತು ಒಂಟಿ ರೂಮಿನಲ್ಲಿ ಪ್ರತಿಧ್ವನಿಸುತ್ತಿದ್ವು. ಕೇಳುವವರಿಲ್ಲದೆ ಕಮರಿ ಕಣ್ಮರೆಯಾಗುತ್ತಿದ್ವು. ಬಹುಶಃ ಅದೊಂದು ಫೋನ್ ಕಾಲ್ ಬಂದಿದ್ರೆ ಮಾತು ಹಾಗು ಮನಸ್ಸು ಎರಡಕ್ಕೂ ಉಸಿರಿರುತ್ತಿತ್ತೇನೋ. ಮಹಾನಗರದಲ್ಲಿ ಯಾರಿಗೂ ಸಮಯವಿರಲ್ಲಿಲ್ಲ ಮಾತಿನ ಹೆಣ ಹೊತ್ತು ಹಾಕಲು. ಕೊಳೆತು ನಾರುವ ಮನಸ್ಸಿಗೊಂದು ಸಾಬೂನು ಹಾಕಲು. ಬೆಳಗ್ಗೆ ಅದೆಷ್ಟೋ ಹೊತ್ತಿಗೆ ಮೊಬೈಲ್ ರಿಂಗಿನುಸುತ್ತಿತ್ತು. ಆತುರದಿಂದ ನೋಡಿದ್ರೆ ಹಾಳಾದ್ದು ಅಲಾರಂ. ಬಹುಶಃ ಅದೊಂದೇ ಅವನ ಮೊಬೈಲ್ ನಲ್ಲಿ ಬರುತ್ತಿದ್ದ ಶಬ್ದ. ಯಾರಿಗೂ ನೆನಪಾಗದೆ ಇರೋದಕ್ಕೆ ಸಾಧ್ಯವಾ ಎಂಬ ಪ್ರಶ್ನೆಯ ಹಿಂದೆ ಉತ್ತರ ಸಿದ್ಧವಿರುತ್ತಿತ್ತು, ನೀನೆ ಇದ್ದೀಯಲ್ಲೋ, ಯಾರ ನೆನಪಿಗೂ ಬಾರದೆ. ಅದು ಸರಿಯೇ.. ನೆನಪಿಟ್ಟುಕೊಳ್ಳುವ ವ್ಯಕ್ತಿತ್ವ ತನ್ನದಲ್ಲ, ತನ್ನನ್ನು ನೆನಪಿಟ್ಟು ಕೊಳ್ಳಲು ತನ್ನವರ್ಯಾರೂ ಇಲ್ಲ. ಹಾಗಾದ್ರೆ ತಾನು ಕಾಯ್ತಾ ಇರೋ ಫೋನ್ ಕಾಲ್ ಯಾರಿದ್ದು..? ತಾನು ಕಾಯ್ತಾ ಇರೋದು ಯಾರಿಗಾಗಿ..? ತನ್ನವರೆನ್ನು ವವರು ಯಾರೂ  ಈಗ ಬದುಕಿಲ್ವೋ..? ಅಥವಾ.. ಮೊದಲಿಂದಲೂ ಇರ್ಲಿಲ್ವೋ..? ಗೊಂದಲಕ್ಕೆ ಬಿದ್ದು ಬಿಡ್ತಾ ಇದ್ದ. ಇಷ್ಟು ದಿನ ಇದ್ದದ್ದು ರಾತ್ರೆ ಬಿದ್ದ ಕನಸೇ..? ಆತನಿಗಂತೂ ಗೊತ್ತಿರ್ಲಿಲ್ಲ. ಅತ್ತಲಿನ ಧ್ವನಿ ಉತ್ತರಿಸಬೇಕಿತ್ತು. ಉತ್ತರಿಸುತ್ತಿತ್ತೇನೋ.. ಧ್ವನಿ ಇದ್ದಿದ್ರೆ. ಬೆಳಗ್ಗೆ ಹೆಣ ಹೊತ್ಕೊಂಡು ಕೆಲಸಕ್ಕೆ ಹೋಗೋದು, ಸಂಜೆಯವರೆಗೂ ತನ್ನ ಹೆಣದ ಮೇಲೆ ಅಕ್ಕಿ, ಸಕ್ಕರೆ, ಬೇಳೆ-ಕಾಳುಗಳ ಮೂಟೆ ಸಾಗಿಸೋದು, ಸಂಜೆ ನೇತ್ರಾವತಿ ಬಾರ್ ನಲ್ಲಿ ಕರುಳಿನಿಂದ ಗಂಟಲಿನವರೆಗೂ ತುಂಬುವಂತೆ  ಕುಡಿಯೋದು, ತನ್ನದೇ ಹೆಣ ಹೊತ್ತು ರೂಮು ಸೇರೋದು. ಘಳಿಗೆಗೊಮ್ಮೆ ಫೋನ್ ನೋಡೋದು. ಕುಡಿದ ಮಬ್ಬು ಇಳಿದರೆ ಮತ್ತೆ ಕೆಲಸಕ್ಕೆ, ಇಲ್ಲ ಅಂದ್ರೆ ಒಂಟಿ ರೂಮಿನಲ್ಲಿ ಒಂಟಿಯಾಗಿ ಬರಬಹುದಾದ ಫೋನ್ ಗಾಗಿ ಕಾಯೋದು. ಇದಿಷ್ಟೇ ಆತನ ದಿನಚರಿ. ಒಂದೆ ಒಂದು ಫೋನು ಬರಬೇಕಿತ್ತು, ಎಲ್ಲವನ್ನು ಹೇಳಿ ತಾನು ಖಾಲಿಯಾಗಿ ಬಿಡಬೇಕಿತ್ತು. ಇದೆ ಕೊನೆ ಆಸೆ ಎಂಬಂತೆ ಬದುಕ್ತಾ ಇದ್ದ. ಸ್ಸಾರಿ.. ಉಸಿರಾಡ್ತಾ ಇದ್ದ ಅಷ್ಟೇ. ಪ್ರತಿ ದಿನ ಕುಡಿದಾಗಲೂ ಒಂದೇ ಕನಸು ಬೀಳುತ್ತಿತ್ತು ಹಾಗು ಅದು ವಾಸ್ತವಕ್ಕೆ ತುಂಬಾ ಹತ್ತಿರವಿರುತ್ತಿತ್ತು. ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಅಪ್ಪನ ಹೊಟ್ಟೆಗೆ ಚೂರಿ ಹಾಕಿದಂತೆ, ಅದನ್ನ ನೋಡಿದ ಅಮ್ಮ ಕತ್ತಲಲ್ಲಿ ಕಣ್ಮರೆ ಆದಂತೆ, ಜೀವದ ಗೆಳೆಯ ನಕ್ಕು ಮರೆ ಆದಂತೆ ಹಾಗು ಪ್ರೀತಿಯ ಹುಡುಗಿ ಮರು ಮದುವೆಯಾದಂತೆ. ಇಷ್ಟೆಲ್ಲಾ ಕನಸ ಪರದೆಯಲ್ಲಿ ಹರಿದಾಡಿದಂತೆ ಎಚ್ಚರಾಗಿ ಬಿಡ್ತಿದ್ದ ಹೆಬ್ಬಾವು ತುಳಿದಂತೆ. ತಾನು ಹೇಳಲೇ ಬೇಕಿತ್ತು, ಅಪ್ಪನನ್ನು ಕೊಂಡದ್ದು ನಾನಲ್ಲ, ಅದು ಜೀವದ ಗೆಳೆಯ. ಬೇರೆ ಯಾರಿಗೂ ಅಲ್ಲದಿದ್ರೂ ಕತ್ತಲಲ್ಲಿ ಕಣ್ಮರೆಯಾದ ಅಮ್ಮನಿಗೆ ಹಾಗೂ ಕೊಲೆಗಾರನ ಪ್ರೆಯಸಿಯಾಗಳು ಒಪ್ಪದೇ ಬೇರೆ ಮದುವಯಾದ ತನ್ನ ಹುಡುಗಿಗೆ ಹೇಳಲೇ ಬೇಕಿತ್ತು. ಊರು ಬಿಟ್ಟು ಬಂದ ಮೇಲೆ ತನ್ನವರ ಸುಳಿವಿಲ್ಲ. ಅವನ ಗೆಳೆಯರೊಂದಿಗೆ ಸೇತುವೆ ಬೆಸೆಯಬಲ್ಲಂತ ಫೋನು ಸ್ಥಬ್ದ ವಾಗಿತ್ತು. ಮನಸ್ಸು ಮೂಖವಾಗಿತ್ತು. ಕುಡಿದು ಖಾಲಿಯಾದ ಬಾಟಲ್ ಆತನ ಬದುಕನ್ನ ಪ್ರತಿಬಿಂಬಿಸುತ್ತಿತ್ತು.