ಟ್ರಿನ್ ಟ್ರಿನ್ ...

ಅದೆಷ್ಟು ದಿನದಿಂದ ಅದೊಂದು ಫೋನ್ ಗಾಗಿ ಕಾಯ್ತಾ ಇದ್ನೋ ಗೊತ್ತಿಲ್ಲ. ಮಹಾ ನಗರದಲ್ಲಿ ಒಂಟಿ ರೂಮು ಮಾಡಿ ಒಂಟಿಯಾಗಿದ್ದ ದಿನದಿಂದ ಅದೊಂದು ಫೋನ್ ಗಾಗಿ ಕಾಯ್ತಾ ಇದ್ದ. ಘಳಿಗೆಗೊಮ್ಮೆ ಫೋನ್ ನೋಡಿ ಬಡಬಡಿಸ್ಥ ಇದ್ದ. ಯಾರೋ ಕೇಳ ಬೇಕಾದ್ದೊಂದು ಯಾರಿಗೂ ಕೇಳದೆ ಅಲೆ ಅಲೆಯಾಗಿ ಹೋಗಿ ಗಾಳಿಯಲ್ಲಿ ವಿಲೀನವಾಗುತ್ತಿತ್ತು.  ಅಂತರಾಳದ ಮಾತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ವು. ಸತ್ತ ಪ್ರತಿ ಮಾತು ಒಂಟಿ ರೂಮಿನಲ್ಲಿ ಪ್ರತಿಧ್ವನಿಸುತ್ತಿದ್ವು. ಕೇಳುವವರಿಲ್ಲದೆ ಕಮರಿ ಕಣ್ಮರೆಯಾಗುತ್ತಿದ್ವು. ಬಹುಶಃ ಅದೊಂದು ಫೋನ್ ಕಾಲ್ ಬಂದಿದ್ರೆ ಮಾತು ಹಾಗು ಮನಸ್ಸು ಎರಡಕ್ಕೂ ಉಸಿರಿರುತ್ತಿತ್ತೇನೋ. ಮಹಾನಗರದಲ್ಲಿ ಯಾರಿಗೂ ಸಮಯವಿರಲ್ಲಿಲ್ಲ ಮಾತಿನ ಹೆಣ ಹೊತ್ತು ಹಾಕಲು. ಕೊಳೆತು ನಾರುವ ಮನಸ್ಸಿಗೊಂದು ಸಾಬೂನು ಹಾಕಲು. ಬೆಳಗ್ಗೆ ಅದೆಷ್ಟೋ ಹೊತ್ತಿಗೆ ಮೊಬೈಲ್ ರಿಂಗಿನುಸುತ್ತಿತ್ತು. ಆತುರದಿಂದ ನೋಡಿದ್ರೆ ಹಾಳಾದ್ದು ಅಲಾರಂ. ಬಹುಶಃ ಅದೊಂದೇ ಅವನ ಮೊಬೈಲ್ ನಲ್ಲಿ ಬರುತ್ತಿದ್ದ ಶಬ್ದ. ಯಾರಿಗೂ ನೆನಪಾಗದೆ ಇರೋದಕ್ಕೆ ಸಾಧ್ಯವಾ ಎಂಬ ಪ್ರಶ್ನೆಯ ಹಿಂದೆ ಉತ್ತರ ಸಿದ್ಧವಿರುತ್ತಿತ್ತು, ನೀನೆ ಇದ್ದೀಯಲ್ಲೋ, ಯಾರ ನೆನಪಿಗೂ ಬಾರದೆ. ಅದು ಸರಿಯೇ.. ನೆನಪಿಟ್ಟುಕೊಳ್ಳುವ ವ್ಯಕ್ತಿತ್ವ ತನ್ನದಲ್ಲ, ತನ್ನನ್ನು ನೆನಪಿಟ್ಟು ಕೊಳ್ಳಲು ತನ್ನವರ್ಯಾರೂ ಇಲ್ಲ. ಹಾಗಾದ್ರೆ ತಾನು ಕಾಯ್ತಾ ಇರೋ ಫೋನ್ ಕಾಲ್ ಯಾರಿದ್ದು..? ತಾನು ಕಾಯ್ತಾ ಇರೋದು ಯಾರಿಗಾಗಿ..? ತನ್ನವರೆನ್ನು ವವರು ಯಾರೂ  ಈಗ ಬದುಕಿಲ್ವೋ..? ಅಥವಾ.. ಮೊದಲಿಂದಲೂ ಇರ್ಲಿಲ್ವೋ..? ಗೊಂದಲಕ್ಕೆ ಬಿದ್ದು ಬಿಡ್ತಾ ಇದ್ದ. ಇಷ್ಟು ದಿನ ಇದ್ದದ್ದು ರಾತ್ರೆ ಬಿದ್ದ ಕನಸೇ..? ಆತನಿಗಂತೂ ಗೊತ್ತಿರ್ಲಿಲ್ಲ. ಅತ್ತಲಿನ ಧ್ವನಿ ಉತ್ತರಿಸಬೇಕಿತ್ತು. ಉತ್ತರಿಸುತ್ತಿತ್ತೇನೋ.. ಧ್ವನಿ ಇದ್ದಿದ್ರೆ. ಬೆಳಗ್ಗೆ ಹೆಣ ಹೊತ್ಕೊಂಡು ಕೆಲಸಕ್ಕೆ ಹೋಗೋದು, ಸಂಜೆಯವರೆಗೂ ತನ್ನ ಹೆಣದ ಮೇಲೆ ಅಕ್ಕಿ, ಸಕ್ಕರೆ, ಬೇಳೆ-ಕಾಳುಗಳ ಮೂಟೆ ಸಾಗಿಸೋದು, ಸಂಜೆ ನೇತ್ರಾವತಿ ಬಾರ್ ನಲ್ಲಿ ಕರುಳಿನಿಂದ ಗಂಟಲಿನವರೆಗೂ ತುಂಬುವಂತೆ  ಕುಡಿಯೋದು, ತನ್ನದೇ ಹೆಣ ಹೊತ್ತು ರೂಮು ಸೇರೋದು. ಘಳಿಗೆಗೊಮ್ಮೆ ಫೋನ್ ನೋಡೋದು. ಕುಡಿದ ಮಬ್ಬು ಇಳಿದರೆ ಮತ್ತೆ ಕೆಲಸಕ್ಕೆ, ಇಲ್ಲ ಅಂದ್ರೆ ಒಂಟಿ ರೂಮಿನಲ್ಲಿ ಒಂಟಿಯಾಗಿ ಬರಬಹುದಾದ ಫೋನ್ ಗಾಗಿ ಕಾಯೋದು. ಇದಿಷ್ಟೇ ಆತನ ದಿನಚರಿ. ಒಂದೆ ಒಂದು ಫೋನು ಬರಬೇಕಿತ್ತು, ಎಲ್ಲವನ್ನು ಹೇಳಿ ತಾನು ಖಾಲಿಯಾಗಿ ಬಿಡಬೇಕಿತ್ತು. ಇದೆ ಕೊನೆ ಆಸೆ ಎಂಬಂತೆ ಬದುಕ್ತಾ ಇದ್ದ. ಸ್ಸಾರಿ.. ಉಸಿರಾಡ್ತಾ ಇದ್ದ ಅಷ್ಟೇ. ಪ್ರತಿ ದಿನ ಕುಡಿದಾಗಲೂ ಒಂದೇ ಕನಸು ಬೀಳುತ್ತಿತ್ತು ಹಾಗು ಅದು ವಾಸ್ತವಕ್ಕೆ ತುಂಬಾ ಹತ್ತಿರವಿರುತ್ತಿತ್ತು. ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದ ಅಪ್ಪನ ಹೊಟ್ಟೆಗೆ ಚೂರಿ ಹಾಕಿದಂತೆ, ಅದನ್ನ ನೋಡಿದ ಅಮ್ಮ ಕತ್ತಲಲ್ಲಿ ಕಣ್ಮರೆ ಆದಂತೆ, ಜೀವದ ಗೆಳೆಯ ನಕ್ಕು ಮರೆ ಆದಂತೆ ಹಾಗು ಪ್ರೀತಿಯ ಹುಡುಗಿ ಮರು ಮದುವೆಯಾದಂತೆ. ಇಷ್ಟೆಲ್ಲಾ ಕನಸ ಪರದೆಯಲ್ಲಿ ಹರಿದಾಡಿದಂತೆ ಎಚ್ಚರಾಗಿ ಬಿಡ್ತಿದ್ದ ಹೆಬ್ಬಾವು ತುಳಿದಂತೆ. ತಾನು ಹೇಳಲೇ ಬೇಕಿತ್ತು, ಅಪ್ಪನನ್ನು ಕೊಂಡದ್ದು ನಾನಲ್ಲ, ಅದು ಜೀವದ ಗೆಳೆಯ. ಬೇರೆ ಯಾರಿಗೂ ಅಲ್ಲದಿದ್ರೂ ಕತ್ತಲಲ್ಲಿ ಕಣ್ಮರೆಯಾದ ಅಮ್ಮನಿಗೆ ಹಾಗೂ ಕೊಲೆಗಾರನ ಪ್ರೆಯಸಿಯಾಗಳು ಒಪ್ಪದೇ ಬೇರೆ ಮದುವಯಾದ ತನ್ನ ಹುಡುಗಿಗೆ ಹೇಳಲೇ ಬೇಕಿತ್ತು. ಊರು ಬಿಟ್ಟು ಬಂದ ಮೇಲೆ ತನ್ನವರ ಸುಳಿವಿಲ್ಲ. ಅವನ ಗೆಳೆಯರೊಂದಿಗೆ ಸೇತುವೆ ಬೆಸೆಯಬಲ್ಲಂತ ಫೋನು ಸ್ಥಬ್ದ ವಾಗಿತ್ತು. ಮನಸ್ಸು ಮೂಖವಾಗಿತ್ತು. ಕುಡಿದು ಖಾಲಿಯಾದ ಬಾಟಲ್ ಆತನ ಬದುಕನ್ನ ಪ್ರತಿಬಿಂಬಿಸುತ್ತಿತ್ತು. 

ಮೊದಲ ಪತ್ರ

ಪ್ರೀತಿಯ ಜೀವನ್ಮುಖಿ...
                ಅಂಚೆಯಣ್ಣನ ಕೈ ಸೇರದೆ, ನನ್ನ ಪೋಸ್ಟಾಫೀಸಿಗೆ ಬಿದ್ದ ಮೊದಲ ಪತ್ರ. ಎಂದೂ ನಿನ್ನ ಕೈ ಸೇರದ ಪತ್ರ. ನಿನ್ನ  ಹೆಸರೇನೆಮ್ಬುದೆ ಗೊತ್ತಿರದ  ಮೊದಲ ಭೇಟಿಯಲ್ಲೇ ನಿನ್ನೆಡೆಗೊಂದು  ಸೆಳೆತ ಸೃಷ್ಟಿಸಿ ಬಿಟ್ಯಲ್ಲಾ..? ಆ ಸೆಳೆತ ಈ  ಪತ್ರದಲ್ಲಿ  ಎರಕಾ ಹೊಯ್ಯುವಂತೆ  ಮಾಡಿದ್ಯಲ್ಲಾ..? ಅದ್ಯಾವ ಶಕ್ತಿ ನಿನ್ನಲ್ಲಿತ್ತೋ ಕಾಣೆ. ಹೆಸರೇ ಗೊತ್ತಿರದ ಸಂದರ್ಭದಲ್ಲಿ ಮೂಡಿದ  ಸೆಳೆತಕ್ಕೊಂದು ಹೆಸರಿಟ್ಟು  ಬಿಟ್ಟೆ  ಅಂದೇ.. ಇಟ್ಟ  ಆ ಅಸಂಬದ್ದ ಹೆಸರು 'ಪ್ರೀತಿ'.
               ಇದೇನು ಪ್ರಕೃತಿ ಸಹಜ ಆಕರ್ಷಣೆಯಾ..? ಸುಂದರಿ ಕಡೆಗೊಂದು ಸೆಳೆತವಾ..? ನಿನ್ನ ಮಾತಿಗಂಟಿದ  ವಶೀಕರನವಾ..?  ಇದು ನನ್ನ ಮೌನದಲ್ಲೇ ಅವೀರ್ಭವಿಸಿದ ಅಮ್ರುತಧಾರೆಯಾ ..? ಪ್ರೀತಿ-ಪ್ರೇಮ ಎಂಬ ಹುಚ್ಚಟವಾ..? ಅಥವಾ.. ಅದೆಲ್ಲಕ್ಕೂ ಮೀರಿದ ಆರಾಧನೆಯ..? ನಿಜ ಅಂದ್ರೆ, ನಿನ್ನ ಕಂಡ ದಿನ ನಿನ್ನ ಕೊರಳಲ್ಲೊಂದು ಕೊಳಲಿದೆಯೆಂದು ನನಗೆ ಗೊತ್ತೇ ಇರಲಿಲ್ಲ ಹಾಗು ಆ ಕೊಳಲಲ್ಲೊಂದು 'ರಾಗ' ನಾನಾಗ ಬಯಸಿದ್ದು ತಿಳಿಯಲೇ ಇಲ್ಲ. ಮೊದಲ ಭೇಟಿಯಲ್ಲೇ ನಿನ್ನೆಡೆಗೊಂದು ಮೂಡಿದ ಅನಿರ್ವಚನೀಯ ಭಾವಕ್ಕೆ ಮುನ್ನುಡಿಯೇನು ? ನಿನ್ನ ಕಣ್ಣಲ್ಲಿದ್ದ ಅಮ್ಮನ ಮಮಕಾರವಾ..? ಹಟಕ್ಕೆ ಬಿದ್ದ ಆ ಮುಂಗುರುಳಾ ..? ಒಡಲಾಳದಿಂದ ಹುಟ್ಟೋ ಕಪಟವಿಲ್ಲದ ನಗುವ..? ಊಹೂ .. ಪ್ರಶ್ನಾ ಮಾಲಿಕೆಯಾಗಿಬಿಟ್ಟೆ ನೀನು.
ಈ ಪತ್ರ ಎಂದೂ ನಿನ್ನ ಕೈ ಸೇರದು ಎಂದುಕೊಂಡಿದ್ದೇನೆ. ಒಂದು ಪಕ್ಷ ಸಿಕ್ಕಿದ್ದೇ ಆದಲ್ಲಿ ನಾವಿಬ್ಬರೂ ಒಟ್ಟಿಗೆ ಕುಳಿತು 'ಶರಾವತಿ'ಯ ಆ ಹಸಿರು ದಂಡೆಯ ಮೇಲೆ ಒಂದೇ ಉಸುರಿನಲ್ಲಿ ಓದಿಬಿಡೋಣ.  

ನನ್ನೆಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧವಿರು. ಇಬ್ಬರೂ ಸೇರಿ ಈ ಬಂಧಕ್ಕೊಂದು ಚಂದನೆ ಹೆಸರಿಡೋಣ.
                                 
                                                                                                      ಇಂತಿ ನಿನ್ನವನಾಗ ಬಯಸಿದ
                                                                                                                     ನಾನು  

ಕೆಂಪು ಛತ್ರಿ ಹಾಗೂ ಸಮಾಜಸೇವೆ

ಹುಡುಗರ ಬಿಸೀನ ಕಡಿಮೆ ಮಾಡಕ್ಕೋ ಏನೋ ಅಂತೂ ಮಳೆ ಬಂದಿದೆ. ಕಳೆದ ಮಳೆಗಾಲದಲ್ಲೇ ಕಡ್ಡಿ ಮುರಿದು ಮೂಲೆ ಸೇರಿದ್ದ ಛತ್ರಿಗಳು ಜೀರ್ಣೋದ್ದಾರಗೊಂದು ರಸ್ತೆಗಿಳಿದಿವೆ. ಅದ್ಯಾಕೋ ಮಳೆ ಜೊತೆಗೆ ಹಳೆ ನೆನಪುಗಳು ಸೇರ್ಕೊಂಡ್ ಬಿಟ್ಟಿವೆ. ಇಂಥ ಭಯಂಕರ ಮಳೆ ಬಂದಾಗೆಲ್ಲ ನೆನಪಾಗೋದು ಕೆಂಪು ಛತ್ರಿಯದ್ದು.. ಸ್ಸಾರಿ... ಕೆಂಪು ಛತ್ರಿ ಹಿಡಿದ ಆ ಹುಡುಗಿಯದ್ದು. ಈಗ್ಗೆ ಒಂದಷ್ಟು ವರ್ಷದ ಹಿಂದೆ ಬಸ್ ಸ್ಟ್ಯಾಂಡ್ನಲ್ಲಿ ನಿಂತಿದ್ದೆ. ಯಾಕೆ ಅಂತ ಕೇಳಬೇಡಿ. ಇನ್ಯಾಕೆ..? ಬಸ್ಸಿಗೆ ಹೋಗೋಣ ಅಂತ. ಎಂದೂ ಸಮಯಕ್ಕೆ ಸರಿಯಾಗಿ ಬಸ್ ಬಂದ ದಾಖಲೆ ನಮ್ಮೂರ ಬಸ್ ಸ್ಟ್ಯಾಂಡ್ ಗಂತೂ ಇಲ್ಲ. ಮನಸಾರೆ ಬಯ್ಯೋದು ಅಭ್ಯಾಸ. ಬೈದಿದ್ರಿಂದ ಬಸ್ ಬರ್ದಿದ್ರು ಮನಸ್ಸಿಗಂತು ಸಮಾಧಾನ ಇದ್ದೆ ಇದೆ. ಕಾದಿದ್ದಕ್ಕಾದ್ರು ಫಲ  ಇದ್ರೆ ಅದೊಂಥರ.. ಈ ಸರ್ಕಾರಿ ಬಸ್ ಗಳು ಒಂದು ದಿನ ಬಂದ್ರೆ ಮೂರು ದಿನ ಕರು ಹಾಕಿ ಕೂರತ್ತೆ. ನಮ್ಮಜ್ಜ ಮಾಡಿದ್ದ ಪುಣ್ಯ ದಿಂದಲೋ ಅಥವಾ ನಾನೂ ಸ್ನಾನ ಮಾಡಿ ಬಂದಿದ್ರಿಂದಲೋ  ಈ  ದಿನ ಕಾದಿದ್ದಕ್ಕೆ ಸಾರ್ಥಕತೆ ಸಿಕ್ತು. ದೂರದಲ್ಲಿ ನಮ್ಮೊರ ಬಸ್ ಗಬ್ಬದ ಎಮ್ಮೆ ತರ ಬರ್ತಾ ಇತ್ತು. ಅದೇ ಸಮಯಕ್ಕೆ ಎಂಟ್ರಿ ಆಯಿತು ಕಣ್ರೀ ಕಥೆ ಹೀರೋಯಿನ್ ದು. ಅದೇ ಹೇಳಿದ್ನಲ.. ಕೆಂಪು  ಛತ್ರಿಯ ಹುಡುಗಿಯದ್ದು. ಅಷ್ಟು ಹೊತ್ತು ಎಲ್ಲಿದ್ಲೋ ಏನೋ ಧಿಡೀರನೆ ಎದುರಿಗೆ ಬಂದ್ಲು ಅದೇ ಕೆಂಪು ಛತ್ರಿ ಹಿಡಿದು. "ಅರೆ ನೀನೇನೋ... ಎಷ್ಟು ದಿನ ಆಯ್ತು ನಿನ್ನ ನೋಡಿ.. ಗುರುತೇ ಸಿಗಲ್ಲ.. ತುಂಬಾ ತೆಳ್ಳಗೆ ಆಗಿದ್ದಿ...!" ಅಂದ್ಲು. ಒಂದರೆ ಕ್ಷಣ ನಾನೂ ಕಕ್ಕಾಬಿಕ್ಕಿ. ನನ್ಯಾವಾಗ ದಪ್ಪ ಇದ್ದೆ ಅನ್ನೋ ಪ್ರಶ್ನೆ ಬೇರೆ ಮನಸ್ಸಲ್ಲಿ. "ಅಯ್ಯೋ.. ಅದ್ಯಾಕ್ ಹಂಗೆ ನೋಡ್ತಿ...? ನನ್ನ ಗುರುತು ಹತ್ಲಿಲ್ವೆ...? ನಾನೂ ಸಂಗೀತ... ನಿನ್ನ PUC ಕ್ಲಾಸ್ ಮೇಟ್". ಗೀತ, ಸಂಗೀತ ಇಂತ ಹೆಸರಿನವರ್ಯಾರು ಇದ್ದ ನೆನಪು ಹತ್ತಲಿಲ್ಲ. ಆದ್ರು ಹುಡುಗಿ ಮಾತಿಗೆ ಇಲ್ಲ ಅಂದು ಅಭ್ಯಾಸ ಇಲ್ಲ. "ಓ ಸಂಗೀತ.. ಅಯ್ಯೋ ನಿನ್ನ ಮರಿಯಕ್ಕಾಗತ್ತ..! ತುಂಬಾ ಬದಲಾಗಿದ್ದೀಯ. ಸ್ವಲ್ಪ ದಪ್ಪ ಆದೆ ಅನ್ಸತ್ತೆ ಅಲಾ" ಅಂದು ನಕ್ಕೆ.. ನಕ್ಕಿದ್ದು ನನಗೇ ಅನುಮಾನ ಬರುವಂತೆ. ಅಷ್ಟೊತ್ತಿಗೆ ಬಸ್ ಬಂದು ನಿಂತಿತ್ತು. ಜನ ಎಲ್ಲ ಬಸ್ ಹತ್ತುತ್ತ ಇದ್ರು . ಬಸ್ ಹತ್ತಕ್ಕೆ ನನಗೇನೂ ಅವಸರ ಇರ್ಲಿಲ್ಲ. ಎಷ್ಟಂದ್ರು ೧೫ ನಿಮಿಷ ಅಲ್ಲೆ ನಿಂತಿರತ್ತೆ. ಅದೂ ಅಲ್ದೆ ಜೀವನದಲ್ಲಿ ಮೊದಲ ಬಾರಿಗೆ ಸಂಗೀತ ಕೇಳ್ತಾ ಇದೆ. ಶ್ರುತಿ ತಪ್ಪದಿದ್ರೆ ಸಾಕು. " ಏ.. ನಿಂಗೊತ್ತಾ.. ನಮ್ಮ ಇಂಗ್ಲಿಷ್ ಟೀಚರ್ ಸತ್ತೂದ್ರಂತೆ", ಅಂದ ಧ್ವನಿ ಸ್ವಲ್ಪ ನಡುಗ್ತಾ ಇದ್ದಂತೆ ಅನ್ಸ್ತು. "ಯಾರು.. KVS ಸಾ ?" ಅಂದೆ. ಹು ಅಂದಿದ್ದು ಗಂಟಲಲ್ಲೇ ಉಳೀತು. ಅಥವಾ ನಂಗೆ ಹಾಗೆ ಅನಿಸ್ತು. ಮೇಷ್ಟ್ರು ಸತ್ರು ಅನ್ನೋ ದುಃಖ ಹುಡುಗಿಯ ಕಳೆಗುಂದಿದ ಮುಖ ನೋಡಿ ಇಮ್ಮುಡಿಗೊಂಡಿತು. ಆದ್ರು ನಿಜವಾದ ದುಃಖ ಮೇಷ್ಟ್ರು ಸತ್ತಿದ್ದಕ್ಕ ಅಥವಾ ಹುಡುಗಿಯ ಬೇಸರಕ್ಕ ಕೊನೆಗೂ ತಿಳೀಲೇ ಇಲ್ಲ. ಏನಂದ್ರು ಮೇಷ್ಟ್ರು ಹಿಂಗೆ ಹೇಳದೆ ಕೇಳದೆ ಸಾಯಬಾರದಿತ್ತು ಅನ್ನಿ. ಅದರ ಸಲುವಾಗಿ ಒಂದೆರಡು ನಿಮಿಷ ಮೌನಾಚರಣೆ. ಮತ್ತೆ ಮಾತಿಗಿಳಿದಳು. "ಯಾವ ಕಡೆ ಹೋಗ್ತಾ ಇದ್ದಿ..?" ಸಂಗೀತದ ಅದ್ಯಾವುದೋ ರಾಗದಲ್ಲೇ ಹೇಳಿದಳು. ಮೂಲತಃ ಎಲ್ಲಿಗೋ ಹೊರಟಿದ್ದೆ ಅನ್ನೋದೇ ಮರೆತಿತ್ತು ಸಂಗೀತದ ಗುಂಗಿನಲ್ಲಿ. ನೆನಪು ಮಾಡಿಕೊಂಡು ಹೇಳಿದೆ " ಈ ಬಸ್ ಎಲ್ಲೀವರೆಗೆ ಹೋಗತ್ತೋ ಅಲ್ಲೆವರೆಗೆ " ಅಂತ. " ಅಂದ್ರೆ ಲಾಸ್ಟ್ ಸ್ಟಾಪ್..? ಸರಿ, ನಾನೂ ಅಲ್ಲಿಗೆ ಹೊರಟಿದ್ದೆ. ಬಾ ಹೋಗೋಣ. ನಾನಾ ticket ತೆಗ್ಸೋ" ಅಂದ್ಲು. ಅದ್ಯಾಕೋ ಸ್ವಲ್ಪ ಜಾಸ್ತಿ ಆಯ್ತು ಅನ್ನಿಸ್ತು. ಹುಡುಗಿ  ನನ್ನ ಕ್ಲಾಸ್ ಮೇಟ್ ಹೌದೋ ಅಲ್ವೋ ಅಂತಾನೇ ನೆನಪಿಗೆ ಬರ್ತಾ ಇಲ್ಲ. ನನಗಂತೂ ನನ್ನ ನೆನಪಿನ ಶಕ್ತಿ ಮೇಲೆ ಅಪಾರ ನಂಬಿಕೆ. ಇತ್ತೀಚಿಗೆ ಮರೆತ ನೆನಪೇ ಇಲ್ಲ. ಅದರಲ್ಲೂ ಹುಡುಗಿ ಹೆಸರು ಮರೆಯೋದ.! ಮುಂದಿನ ಯೋಚನೆಗೆ ಬ್ರೇಕ್ ಬಿತ್ತು,, " ಅಯ್ಯೋ ಇನ್ನೂ ನಿನ್ನ ಕಂಜೂಸ್  ಬುದ್ದಿ ಬಿಟ್ಟಿಲ್ವ...? ೧೦ ರುಪಾಯಿಗೂ ಮುಖ ನೋಡ್ತಿಯಲ್ಲ" ಅಂದಾಗ.  "ಏ ಹಂಗೇನಿಲ್ಲ..ನೀನು ಅಲ್ಲಿಗೆ ಯಾಕೆ ಬರ್ತಿದೀಯ  ಅಂತ ಯೋಚನೆ ಮಾಡ್ತಿದ್ದೆ ಅಷ್ಟೇ. ಸರಿ, ಹತ್ತು ಬಸ್" ಅಂದೆ. ಅಂತೂ ಬಸ್ ಹತ್ತಿ ಕುಳಿತಿದ್ದಾಯ್ತು. ಕಂಡಕ್ಟರ್ ಮಹಾಶಯಂಗೆ ದುಡ್ಡು ಕೊಟ್ಟು ಟಿಕೆಟ್ ತಗೊಂಡಿದ್ದು ಆಯ್ತು. ಯಾಕೋ ಯಾರೋ ನಕ್ಕಂತೆ..! ಜೇಬಿನಲ್ಲಿ ಕುಳಿತ ಟಿಕೆಟ್ ಆಗಿರಬಹುದೇ ಅನ್ನೋ ಕೆಟ್ಟ ಅನುಮಾನ. ನೆನಪಿನ ಅಳಕ್ಕೆ ಹೊಕ್ಕಿ ನೋಡಿದ್ರೂ ಯಾರ್ಯಾರಿದ್ದೋ ಜುಮುಕಿ, ಬಳೆ ಎಲ್ಲ ಸಿಗತ್ತೆ, ಇವಳ ಮುಖ ಕಾಣ್ತಾಯಿಲ್ಲ. ಇಂಥ ಸಂಗೀತ ಎಂದು ಕೇಳಿದ್ದಿಲ್ಲ. ಹೊಸ ರಾಗ. ತೀರಾ ತಲೆ ಕೆಡಿಸಿಕೊಂಡು ಅಭ್ಯಾಸ ಹಾಗು ಅವಶ್ಯಕತೆ ಇಲ್ಲ. ಹೆಂಗು ಅವಳೇ ನನ್ನ ಕ್ಲಾಸ್ ಮೇಟ್ ಅಂದಿದಾಳಲ್ಲ, ಅದರಲ್ಲೋ ನನ್ನ ಕಂಜೂಸ್ ಬುದ್ದಿ ಬಗ್ಗೆ ಹೇಳ್ತಾ ಇದಾಳೆ ಅಂದ್ರೆ ನನ್ನ ಪರಿಚಯ ಇರತ್ತೆ ಅನ್ನಿಸಿ ಸಣ್ಣ ನಿದ್ದೆಗೆ ಶರಣು ಹೋದೆ. "ಯಾರ್ರಿ last stop ?" ಎಂಬ ಧ್ವನಿ ಕೇಳಿದ ಮೇಲೇನೆ ಎಚ್ಚರ ಆಗಿದ್ದು. ಕಣ್ಣು ಬಿಟ್ಟು ನೋಡಿದ್ರೆ ಹುಡುಗಿ ಮುಂದಿನ ಬಾಗಿಲಲ್ಲಿ ಇಳಿತಾ ಇದೆ. ಸ್ವಲ್ಪ ವೇಗದಿಂದಲೇ ಬಸ್ ಇಳಿದು ಅತ್ತ ಕಡೆ ಹೋಗ್ತಾ ಇದ್ದವಳನ್ನ "ಸಂಗೀತ" ಎಂದು ಕೂಗಿದೆ. ನಿಂತಳು. ಹತ್ರ ಹೋದ್ರೆ ಹಿಂಗನ್ನೋದೆ...! "ನಾನು ಸಂಗೀತ ಅಲ್ಲ". ಅಂತೂ ಅಪಶ್ರುತಿ ಬಂದೇ  ಬಿಡ್ತು ಸಂಗೀತದಲ್ಲಿ. ಮತ್ತೆ..? ಎಂದೆ. "ನಾನು ರಮ್ಯ. ನಿಮಗೆ ಮೋಸ ಮಾಡಿದ್ದಕ್ಕೆ ನಿಜವಾಗಲು ಸ್ಸಾರಿ. ನಾನು ಮುಂಬಯಿಯವಳು. ನನ್ನ ಫ್ರೆಂಡ್ ಮನೆಗೆ ಬಂದಿದ್ದೆ. ಇವತ್ತು ಪೇಟೆ ಸುತ್ತೋಕೆ ಅಂತ ಹೋಗಿದ್ದೆ. ಅಲ್ಲಿ ನನ್ನ ಪರ್ಸ್ ಕಳೆದು ಹೋಯ್ತು. ಹೆಂಗಪ್ಪ ಬರೋದು ಅಂತ ಯೋಚನೆ ಮಾಡ್ತಾ ಇದ್ದಾಗಲೇ ನೀವು ಕಂಡ್ರಿ. ಕಾಳು ಹಾಕಿದೆ. ಆಯ್ಕಂದ್ರಿ. anyway thank you . ನಾಳೆ ಬೆಳಗ್ಗೆ ಮೊದಲ ಬಸ್ ಗೆ ವಾಪಸ್ ಹೋಗ್ತಾ ಇದೀನಿ. ಸರಿಯಾದ ಸಮಯಕ್ಕೆ ಬಸ್ ಸ್ಟ್ಯಾಂಡ್ ಗೆ ಬಂದ್ರೆ ನಿಮ್ಮ ೧೦ ರುಪಾಯಿ ಕೊಡ್ತೀನಿ. ಸರಿ.. ನಾನಿನ್ನು ಬರ್ತೀನಿ. KVS ಬದುಕಿದ್ರೂ ಇರಬಹುದು ವಿಚಾರಿಸಿ ನೋಡಿ" ಎಂದು ಹೊರಟೆ ಹೋದ್ಲು ಕೆಂಪು ಛತ್ರಿ ಹಿಡಿದು. ಹೌದು... ನಿಜವಾಗಲು ನಕ್ಕಿದ್ದು ಕೇಳ್ತು. ಜೇಬಿನಲ್ಲಿದ್ದ ಟಿಕೆಟ್ ನಗ್ತಾ ಉಂಟು. ಅದನ್ನು ತೆಗೆದು ಬಿಸಾಕಿ, ಅಯ್ಯೋ ಮೋಸ ಹೋದ್ರೆ ಏನಂತೆ..? ಸಹಾಯ ಮಾಡಿದ ಹಾಗೆ ಆಯ್ತು ಎಂದು ಸಮಾಧಾನಪಟ್ಕೊಳ್ತಾ ನಾನೂ ಹೊರಟೆ, ಸಮಾಜ ಸೇವೆಯ ಗುಂಗಿನಲ್ಲಿ. 

ಯಾವನಿಗೊತ್ತು

ಅವಳದ್ದೋ ಫುಲ್ ಸ್ಟಾಪ್ ಇಲ್ದಂಗೆ ಮಾತಾಡೋ ಖಯಾಲಿ. ನಂದು ಮಾತಾಡಿದ್ರೆ ಮುತ್ತು ಉದ್ರತ್ತೇನೋ ಅನ್ನೋ ಹಾಗೆ ದಿವ್ಯ ಮೌನ. ನಾನು ಭಯಂಕರ ಭಾವ ಜೀವಿ, ಅವಳು ತೀರಾ ಪ್ರಾಕ್ಟಿಕಲ್ಲು. ಅವಳದ್ದು ಹಾಲಿನಂಥ ಬಣ್ಣ, ನಂದು ತೊಳೆದ ಕೆಂಡ. ಹೀಗೆ, ಪ್ರಪಂಚದಲ್ಲಿ ಯಾವ್ಯಾವ್ದಕ್ಕೆ ವಿರುದ್ಧ ಪದಗಳಿವೆಯೋ ಅವುಗಳಿಗೆಲ್ಲ ಜೀವಂತ ಉದಾಹರಣೆ, ನಾನು-ಅವಳು. ವಿರುದ್ಧ ದ್ರುವಗಳು ಆಕರ್ಷಿಸುತ್ತವೆ ಅನ್ನೋದು ಫ್ಯಾಕ್ಟು. ನಂಗೆ ಅವಳ ಮಾತು ಇಷ್ಟ, ಅವಳು ನನ್ನ ಮೌನಕ್ಕೆ ಶರಣು. ಇಷ್ಟು ವರ್ಷ ಅದೆಲ್ಲಿದ್ಲೋ ಕಾಣೆ. ಒಂದಷ್ಟು ದಿನದ ಹಿಂದೆ ಸಿಕ್ಕಳು, ಸುಮ್ನೆ ನಕ್ಕಳು. ಆಗಬಾರದ್ದೆಲ್ಲ ಆಯ್ತು. ಆದ ಮೇಲೆ ತಿಳೀತು ಅವಳು ಎತ್ತು, ಏರಿಗೆ ಎಳಿತಾಳೆ, ನಾನು ಕೋಣ , ನೀರಿಗೆ ಎಳೀತೀನಿ ಅಂತ. ಆದ್ರು ನಮ್ಮಿಬ್ಬರ ಮಧ್ಯೆ ಜಗಳ ಆಗಿದ್ದು ಕಡಿಮೆ. ಅವಳಿಗೆ ಸಿಟ್ಟು ಬಂದು ಕೂಗಾಡಿ, ರೇಗಾಡಿ ಮುಖ ಗಂಟಾಕಿಕೊಂಡು  ಎದ್ದು ನಿಂತ್ರೆ ನಂಗೆ ಸಾಕ್ಷಾತ್ ಚಾಮುಂಡಿ ದರ್ಶನ. ಬ್ರಹ್ಮಂಗೆ ಅದೇನು ಸಿಟ್ಟಿತ್ತೋ  ಕಾಣೆ, ಸೇಡು ತೀರಿಸ್ಕೊಂದು ಬಿಟ್ಟ, ನಿನ್ನಂಥ ವಾಚಾಳೀನ ಗಂಟು ಹಾಕಿ ಅಂತ ನಾನಂದ್ರೆ, ನಂದು ಸೇಮ್ ಫೀಲಿಂಗು, ಬ್ರಹ್ಮನ ಸೇಡಿಗೆ ನಾನೂ ಬಲಿ, ನಿನ್ನಂತ ಮೂಕನ್ನ ತಗುಲಿ ಹಾಕಿದ, ನೀನು ಒಂದೇ ಶಿರಾಡಿ ಘಾಟಿಯಲ್ಲಿರೋ ಕಲ್ಲುಬಂಡೆಗಳು ಒಂದೇ ಅನ್ನೋದು ಅವಳ ಉತ್ತರ. ಮಳೆಗಾಲ ಸಕತ್ತಾಗಿದೆ ಒಂದೇ ಒಂದು ಸಾರಿ ಬಾ ಮಳೆಯ ರಾಗಕ್ಕೆ ನಾವು ತಾಳ ಹಾಕುವ ಅಂದ್ರೆ ಮಳೇಲಿ ನೆಂದ್ರೆ ಜ್ವರ ಬರತ್ತೆ, ಸುಮ್ನೆ ೨೦೦ ರೂಪಾಯಿ ದಂಡ ಅಂತಾಳೆ. ನೀನೊಬ್ನೇ ನೆನಿ ಬಣ್ಣ ಬಿಟ್ರೂ ಬಿಡಬಹುದು ಅಂತ ರೇಗಿಸ್ತಾಳೆ. ಬಣ್ಣ ಬದಲಾಯಿಸೋದು ನಿಮ್ಗೆ ದೇವ್ರು ಕೊಟ್ಟ ಕಾಣಿಕೆ  ಅಂದ್ರೆ ಕಣ್ಣು ಕೆಂಪು ಮಾಡ್ತಾಳೆ. ಅಲ್ನೋಡು ಹೂವು ಎಷ್ಟು ಚೆನ್ನಾಗಿದೆ, ಆ ಗಿಡಕ್ಕೆ ದೇವರು ಮಾಡಿರೋ ಅಲಂಕಾರ ಆ ಹೂವು ಅನ್ಸತ್ತೆ ಅಂದ್ರೆ, ಅರ್ಥ ಆಗದೆ ಇರೋ ಹಾಗೆಲ್ಲ ಮಾತಾಡ್ಬೇಡ.. ಚೆನ್ನಗಿರೋದೇನೋ ಹೌದು.. ಹುಡ್ಗ ಕಿತ್ಕೊಡೋ... ಪ್ಲೀಸ್... ಅಂತಾಳೆ. ಅಷ್ಟ್ರು ಮೇಲು ಅಂದ ಇರೋದು ಆನಂದಿಸೋಕೆ, ಅನುಭವಿಸಬೇಕು ಅನ್ನೋದು ತಪ್ಪು ಅಂತೇನಾದ್ರೂ ಅಂದ್ರೆ ಕಿತ್ಕೊಡ್ತೀಯೋ ಇಲ್ವೋ ಅಂತ ಕಣ್ಣಲ್ಲೇ ಧಮಕಿ ಹಾಕ್ತಾಳೆ. ಹೀಗೆ ನಮ್ಮಿಬ್ಬರದು ತದ್ವಿರುದ್ಧ. ಇಬ್ಬರ ಮದ್ಯೆ ಏನಿದ್ಯೋ ಗೊತ್ತಿಲ್ಲ. ಆದ್ರೆ ಒಂದಂತು ಸತ್ಯ, ಅವಳಿಲ್ಲದೆ ಬದುಕೋದು ಕಷ್ಟ. ಅವಳ ಕಣ್ಣಲ್ಲಿ ನೀರು ಬಂದ್ರೆ ನನ್ನ ಕಣ್ಣಲ್ಲಿ ರಕ್ತ ಬಂದ ಹಾಗೆ ಆಗತ್ತೆ. ಅವಳ ಮಾತು ಕೇಳದ ದಿನ ವ್ಯರ್ಥ  ಅನ್ಸತ್ತೆ. ಅವಳು ನನ್ನ ಭಾವದ ಮಾತಿನ ರೂಪ ಅನ್ನೋದು ನನ್ನ ವಿಚಾರ. ನನ್ನ ಮೌನಕ್ಕೆ ಅರ್ಥ ಅವ್ಳು, ಅವಳ ಮಾತಿಗೆ ಕಿವಿ ನಾನು. ವಿಷಯದ ಹಂಗಿಲ್ದೆ ಮಾತಾಡೋ ಕಲೆ ಅವಳದ್ದು, ಮೌನದಿಂದಲೇ ಉತ್ತರಿಸೋ ಕಲೆ ನಂದು. ಆದ್ರು ಮನದ ಮೂಲೆಯಲ್ಲೆಲ್ಲೋ ವಿವರಣೆಗೆ ನಿಲುಕದ ಭಯ... ಅವಳು  ಸಿಕ್ತಾಳ ಕೈಯಿ ಕೊಡ್ತಾಳ.. ಯಾವನಿಗೊತ್ತು.