ಏಕ್ ಬೂಂದ್ ಕೀ ಕಹಾನಿ

ಆ ಮಳೆಯ ಹನಿಗೆ ಇದು ಮೊದಲ ಪ್ರಯಾಣ. ಮೋಡದಲ್ಲಿದ್ದ ತನ್ನವರನ್ನೆಲ್ಲ ಬಿಟ್ಟು ಧರೆಗೆ ಧುಮುಕಬೇಕಾದ ಘಳಿಗೆ ಬಂದಿದೆ. ಹನಿಯ ಮನದಲ್ಲೇನೋ ಒಂಥರಾ ದುಗುಡ, ದುಮ್ಮಾನ. ಇಷ್ಟು ದಿನ ಒಟ್ಟಿಗೆ ಮೋಡ ದಲ್ಲಿದ್ದ ಸಹವರ್ತಿಗಳೂ ಸಹ ಮಳೆಯ ರೂಪ ತಾಳಿ ಇಳೆಗೆ ಬರುತ್ತಾರಾದರೂ ಮತ್ತೊಮ್ಮೆ ಎಲ್ಲರೂ ಒಟ್ಟಿಗೆ ಸೇರುತ್ತೇವೋ ಇಲ್ಲವೋ ತಿಳಿಯದೆ ಮನ ಮಂಕಾಗಿತ್ತು. ಈ ಹನಿಗೆ ತನ್ನ ಜೀವನದ  ಹಳೆಯ ನೆನಪುಗಳೆಲ್ಲ ಮರೆತಂತಿತ್ತು. ತಾನು ಹೇಗೆ ಈ ಮೋಡದಲ್ಲಿ ಒಂದಾದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ.ಆದರೆ ಈ ಮೋಡದ ಮನೆಗೆ ಬಂದ ನಂತರ ಅಲ್ಲಿದ್ದವರೆಲ್ಲರೊಂದಿಗೂ ಬೆರೆತು... ಅದೆಲ್ಲಿಂದಲೋ ಹೊರಟು... ಸಾವಿರಾರು ಮೈಲಿ ಕ್ರಮಿಸಿ ಈಗ ಮೋಡ ಬಿಟ್ಟು ಧರೆಗಿಳಿಯಬೇಕಾದ ಸಮಯ ಬಂದಿತ್ತು. ಆ ಮೋಡದಲ್ಲೊಂದಾದ ದಿನ ತನಗೆ ಸಿಕ್ಕ ಸ್ವಾಗತವನ್ನು ನೆನೆದು ಮನ ತುಂಬಿ ಬಂದು ಕಣ್ಣೀರ ಹನಿ ಹೊರಟಿತ್ತು. ಅಂದೇ ತಿಳಿದದ್ದು ತಾನು ಸ್ವಾತಿ ಮಳೆಯ ಮೋಡಕ್ಕೆ ಸೇರಿದ್ದೇನೆಂದು ಹಾಗು ಸ್ವಾತಿ ಮಳೆಗೆ ಇದ್ದ ಅದರದೇ ಆದ ಸ್ಥಾನದ ಬಗ್ಗೆ ಅಂದೇ ಹೇಳಿದ್ದರು ಸುತ್ತಮುತ್ತಲಿದ್ದ ಹನಿಗಳು. ತಾನು ಮುತ್ತಾಗುವ ಅವಕಾಶ ಹೊಂದಿದ್ದೇನೆಂದು ತಿಳಿದು ಎದೆಯುಬ್ಬಿಸಿ ನಿಂತು ಸಂತಸಪಟ್ಟಿತ್ತು. ಈಗಲೂ ಈ ಹನಿಗೆ ಅದೇ ಆಸೆ... ತನ್ನ ಮೊದಲ ಪ್ರಯಾಣದಲ್ಲೇ ಕಪ್ಪೆ ಚಿಪ್ಪಿನ ಗರ್ಭಕ್ಕೆ ಸೇರಿ ತಾನು ಮುತ್ತಿನ ಜನ್ಮ ತಾಳಿ ಭೂಮಿಯಲ್ಲಿ ವಿಶಿಷ್ಟ ಸ್ಥಾನ ಪಡೆಯಬೇಕೆಂದು. ಆದರೂ, ಇಷ್ಟು ದಿನ ಜೊತೆಗಿದ್ದವರ ಅಗಲಿ ಮುತ್ತಾಗುವ ಆಸೆ ತನ್ನ ಸ್ವಾರ್ಥಕ್ಕೆ ಹಿಡಿದ ಕನ್ನಡಿಯೇನೋ ಎಂಬ ಶಂಕೆ ಈಗ.
 ಸ್ವಾತಿ ಮಳೆಯ ಪ್ರತಿ  ಹನಿಯೂ  ಮುತ್ತಾಗುಹುದಿಲ್ಲ. ತಾನು ಕಪ್ಪೆ ಚಿಪ್ಪಿನೊಳಗೆ ಹೋದರೆ ಮಾತ್ರ ಮುತ್ತಾಗುವ ಭಾಗ್ಯ. ಇಲ್ಲದಿದ್ದರೆ...? ಯಾರ ಮನೆಯ ಹಂಚಿನ ಮೇಲೋ.. ಯಾವ ರಸ್ತೆಯ ಗುಂಡಿಯ ಒಳಗೋ... ಯಾವ ಕಾಡಿನ ಯಾವ ಮರದ ಎಲೆಯ ತುದಿಗೋ... ಅಥವಾ... ತನಗಿಂತ ಅದೆಷ್ಟೋ ಪಾಲು ದೊಡ್ದದಿರುವ  ಬಯಲಿನಲ್ಲಿನ ಹುಲ್ಲಿನ ಬುಡವೊ... ತನ್ನ ಗತಿ ಇನ್ನೂ ನಿರ್ಧಾರವಾಗಿಲ್ಲ. ಮುತ್ತಾದರೆ ಮುಕ್ತಿ. ಇಲ್ಲದಿದ್ದರೆ ಇನ್ನೆಷ್ಟು ಬಾರಿ ತನ್ನ ಜೀವನ ಚಕ್ರ ಉರುಳಬೇಕೋ..? ಯೋಚನೆ ಸಾಗುತ್ತಿರುವಾಗಲೇ ಯಾರೋ ದೂಡಿದ ಅನುಭವ. ತನ್ನ ಪಯಣ ಪ್ರಾರಂಭ. ದೇವರೇ... ನನ್ನನ್ನ ಮುತ್ತಾಗಿಸಪ್ಪ ಎಂಬ ಮೋರೆ ಮುಗಿದಿತ್ತೋ ಇಲ್ವೋ, ಮೋಡ ಬಿಟ್ಟು ಭೂಮಿಗೆ ಅಭಿಮುಖವಾಗಿ ಹೊರಟಾಗಿತ್ತು. ಅಯ್ಯೋ... ಈ ಎತ್ತರ ನೋಡಿ ತಲೆ ತಿರುಗ್ತಾ ಇದೆ. ಈ ರಭಸದಿಂದ ಭೂಮಿಗೆ ಬಿದ್ರೆ ತಮ್ಮ ಮುಖಕ್ಕೆ ಏನೂ ಆಗಲ್ವೇ ಎಂದು ಪಕ್ಕದಲ್ಲಿ ತನ್ನಷ್ಟೇ ರಭಸದಿಂದ ಬೀಳ್ತಾ ಇದ್ದ ಹನಿಗೆ ಕೂಗಿ ಕೇಳಿತು. ಶರವೇಗದಲ್ಲಿ ಬೀಳುವಾಗ ಪಕ್ಕದ ಹನಿ ಹೇಳಿದ್ದು ಸರಿಯಾಗಿ ಕೇಳಲಿಲ್ಲ. ಕೇಳಿದ್ದಿಷ್ಟು- ತಾವು ನೀರ ಹನಿಗಳು. ಎಷ್ಟೇ ಎತ್ತರದಿಂದ, ಎಷ್ಟೇ ರಭಸವಾಗಿ, ಎಲ್ಲಿಗೆ  ಬಿದ್ದರೂ ತಮಗೆ ಮತ್ತೆ ತಮ್ಮ ಆಕಾರ ತಾಳುವ ಶಕ್ತಿ ಇದೆ. ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಟಪ್... ಓ.. ಮನೆಯ ಹಂಚಿನ ಮೇಲೆ ಬಿದ್ದಿದ್ದೇನೆ. ನಾನು ಮುತ್ತಾಗಲಿಲ್ಲ. ಅರೆ... ಎಲ್ಲರು ಮುಂದೆ ಹೋಗುತ್ತಿದ್ದಾರೆ. ತಾನೇಕೆ ಬಿದ್ದಲ್ಲಿಯೇ ನಿಂತುಬಿಟ್ಟೆ. ಕೈ, ಕಾಲು ಮುಖ ಎಲ್ಲವನ್ನು ಮುಟ್ಟಿ ನೋಡಿಕೊಂಡಿತು. ಎಲ್ಲವೂ ಸರಿಯಾಗೇ ಇದೆ ಆದರೆ ತಾನೇಕೆ ಚಲಿಸುತ್ತಿಲ್ಲ? ನಾನು ಸಿಕ್ಕಿಕೊಂಡಿದ್ದೇನೆ. ಬಿದ್ದ ರಭಸಕ್ಕೆ ಬಿದ್ದಲ್ಲಿಂದ ಹಾರಿ ಪಕ್ಕದಲ್ಲಿದ್ದ ಕಸಕ್ಕೆ ಬಂದು ಸಿಕ್ಕಿಕೊಂಡಿದ್ದೇನೆಂದು ತಿಳಿಯಿತು. ತನ್ನ ಜನ್ಮ ಇಲ್ಲೇ ನಶಿಸುಹುದೆಂದು ದುಃಖಿಸುವಾಗ ಯಾರೋ ಕಾಲೆಳೆದಂತಾಯಿತು. ಓ.. ಬೀಳುವಾಗ ಪಕ್ಕದಲ್ಲಿದ್ದ ಹನಿ... ತನ್ನನ್ನು ಇಲ್ಲಿಂದ ಬಿಡಿಸಲು ಕಾಲೆಳೆಯುತ್ತಿದೆ. ಅದರ ಶ್ರಮ ಮೊದಲಿಗೆ ವ್ಯರ್ಥವಾಯಿತಾದರೂ ಅದರ ಪ್ರಯತ್ನಕ್ಕೆ ಹತ್ತಾರು ಹನಿಗಳ ಸಹಾಯ ದೊರೆತ ನಂತರ ಫಲ ನೀಡಿತು. ಈಗ ನಾನು ಬಂಧಿ ಮುಕ್ತ. ಹಂಚಿನ ಮೇಲೆ ನಾಜೂಕಾಗಿ, ಎರಡು ಹಂಚುಗಳ ನಡುವೆ ಇದ್ದ ಸಣ್ಣ ಜಾಗದಲ್ಲಿ ಬೀಳದಂತೆ ಜಾರಿ... ಟಪ್... ಮಣ್ಣಿನ ವಾಸನೆ ಮೂಗಿಗೆ ಬಡೀತಾ ಇದೆ. ಓ.. ಭೂಮಿಗೆ ಬಂದಿದ್ದೇನೆ. ಇನ್ನೂ ತಾನು ಸಾಗರ ಸೇರಬೇಕು. ಈ ಪಯಣದಲ್ಲಂತೂ ಮುತ್ತಾಗಲಿಲ್ಲ. ಸಾಗರ ಸೇರಿ ಸೂರ್ಯನ ಬಿಸಿಲಿನೊಡನೆ ಆಕಾಶಕ್ಕೆ ಹಾರಿ ಮತ್ತೆ ಮೋಡವಾಗಿ ಭೂಮಿಗಿಳಿಯಬೇಕು. ಮತ್ತದೇ ಸ್ವಾತಿ ಮಳೆಯ ಮೋಡವಾಗುತ್ತೇನೋ ಇಲ್ವೋ ಗೊತ್ತಿಲ್ಲ. ಅದೆಷ್ಟೋ ಹನಿಗಳಲ್ಲಿ ತಾನೂ ಒಂದಾಗಿ ಎತ್ತ ಹೋಗುತ್ತಿದ್ದೇನೆ ಎಂಬುದೂ ತಿಳಿಯದೆ ತನ್ನ ಭವಿಷ್ಯವನ್ನು ಯೋಚಿಸುತ್ತ ಸಾಗುತ್ತಿತ್ತು. ಒಮ್ಮೆ ಮೋಡದಿಂದ ಬೀಳುವಾಗಿನ ರಭಸ ಮತ್ತೊಮ್ಮೆ ನಿಂತ ನೀರಿನಷ್ಟೇ ಮಂದ.. ಅಂತೂ ಪಯಣ ಸಾಗುತ್ತಿತ್ತು. ಅಣ್ಣಾ... ಸಮುದ್ರ ಇನ್ನೂ ಎಷ್ಟು ದೂರವಿದೆ ಎಂದು ಮುಂದೆ ಹೋಗುತ್ತಿದ್ದ  ಹನಿಯನ್ನು ಕೇಳಿತು. ಅಯ್ಯೋ.. ಮಂಕೆ..! ನಮ್ಮ ಪ್ರಯಾಣ ಈಗಿನ್ನೂ ಪ್ರಾರಂಭವಾಗಿದೆ. ಈ ಚರಂಡಿಯಿಂದ ಹೊಳೆ ಸೇರಿ, ಹೊಳೆಯಿಂದ ನದಿ, ನದಿಯಿಂದ ಸಮುದ್ರ ಇನ್ನೆರಡು ತಿಂಗಳಾದರೂ ಬೇಕು ಎಂದಿತು ಎದುರಿನ ಹನಿ. ಅಬ್ಬ.. ಏನಿದು ವಾಸನೆ..? ಗಟಾರದ ಗಬ್ಬಿಗೆ ಮೂಗು ಮುಚ್ಚಿಕೊಂಡು ಸಾಗತೊಡಗಿತು.
ಎರಡು ತಿಂಗಳ ನಿರಂತರ ಚಲನೆಯಿಂದ ಸಮುದ್ರ ಸೇರಿಯಾಗಿತ್ತು. ಒಮ್ಮೆ ಕಡಲ ತೀರ, ಮತ್ತೊಮ್ಮೆ ಕಡಲಾಳ.. ಹೀಗೆ.. ಎತ್ತಲೆತ್ತಲೋ ಬದುಕು ಸಾಗುತ್ತಿತ್ತು. ಸಧ್ಯಕ್ಕೆ ಸೂರ್ಯ ರಶ್ಮಿಗೆ ಕಾಯುತ್ತಾ ಸಮುದ್ರದ ಮೇಲೆ ತೇಲುತ್ತಿತ್ತು. ಸೂರ್ಯನ ತಾಪ ಖಾರವಾಗಲು ಮತ್ತೊಂದು ತಿಂಗಳು ಕಾಯಬೇಕು. ಹನಿ ಹಣೆಬರಹವೋ.. ವಿಧಿಯ ಕುಚೆಷ್ಟೆಯೋ.. ಅಷ್ಟರಲ್ಲಿ ಹೋದ ಹಡಗಿನಿಂದ ತೈಲ ಸುರಿಯಿತು. ತೈಲ ಬಂಧಿಯಾದ ಹನಿ ಬಿಡುಗಡೆಗೆ ಇನ್ನೂ ಕಾಯ್ತಾ ಇದೆ. ಬಂಧಮುಕ್ತವಾದರೆ ಅದರ ಕನಸು ಕೈಗೂಡಬಹುದೇನೋ. ಆಸೆ ಕಮರುವ ಮೊದಲು ಶಿಶಿರನ ತಾಪ ತಾಗಿದರೆ ಮತ್ತೊಮ್ಮೆ ಮೋಡವಾಗಬಹುದು. ಇಲ್ಲದಿದ್ದರೆ...?    

ವಿ. ಸೂ. ೨೨/ ೧೧/ ೧೧/ ರ ಉದಯವಾಣಿಯ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ. ಪ್ರಕಟ ಮಾಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು.

ಭೋ ಪರಾಕ್...

ಒಬ್ಬರಿಗೆ ಕಾಲಿಲ್ಲ, ಮತ್ತೊಬ್ಬರಿಗೆ ಕೈ...
ಒಬ್ಬರ ತಲೆ ಮೊತ್ತೊಬ್ಬರ ಪಾದಕೆ...
ಯುವಕ-ಮುದುಕನೆಂಬ ಭೇದವಿಲ್ಲ..
ಮಲಗಿದ ಯಾರಿಗೂ ಎಚ್ಚರವಿಲ್ಲ...

ಮುಗಿಲು ಮುಟ್ಟುವ ಆಕ್ರಂದನ
ಕೇಳುವವರು ಗತಿಯಿಲ್ಲ
ಅರೆ ಸತ್ತ ಜೀವಗಳು
ರಕ್ತ ಸಿಕ್ತ ದೇಹಗಳು
ಸತ್ತವರಿಗೆಲ್ಲ ವೀರ ಸ್ವರ್ಗವಂತೆ...!

ಹೆಣದ ಮೇಲೊಂದು ಕಾಲು..
ತಲೆಗೆ ಕಿರೀಟ..
ಕುಳಿತ ಸಿಂಹಾಸನದ ಕೆಳಗೆ
ಕೋಟಿ  ಸಮಾಧಿಗಳು..
ವಿಜಯ ನಗೆ ಮೊಗದಲಿ
ಸೈನಿಕನ ರುಂಡ ಬಗಲಲಿ
ಸುತ್ತೆಲ್ಲ ಕೂಗು...
...ರಾಜಾ...ಭೋ ಪರಾಕ್..
...ಭೋ ಪರಾಕ್
...ಭೋ ಪರಾಕ್

ಸೋಮವಾರದ ಶನಿ...

"ವಿಶ್ವಾ..." ಎಂಬ ಕೂಗು ಕೇಳಿ ಕಿಟಕಿಯ ಬಳಿ "ಶತಾಬ್ದಿ ಎಕ್ಸ್ ಪ್ರೆಸ್" ಗೆ ಕಾಯ್ತಾ ಇದ್ದ ವಿಶ್ವನಾಥ ತನ್ನ ಟೇಬಲ್ ಬಳಿ ಓಡಿ ಬಂದು ಪುಸ್ತಕ ಹಿಡಿದು ಕುಳಿತ. ಇದು ನಿತ್ಯದ ದಿನಚರಿ. "ವಿಶ್ವಾ ಕೂಗಿದರೆ ಓ ಹೇಳೋಕೆ ಆಗಲ್ವಾ...? ಕಿವಿ ಕೆಪ್ಪಾಯ್ತು ಎಂಟೇ ವರ್ಷಕ್ಕೆ...ಬಾ ತಿಂಡಿಗೆ" ಎನ್ನುತ್ತಾ ರೂಮಿಗೆ ಬಂದ ಅಮ್ಮ "ಏನೋ ಓದೋ ನಾಟಕ ಆಡ್ತಿಯಾ....?..." ನಾಟಕ ಆಡುತ್ತಿರುಹುದರಲ್ಲಿ ಅನುಮಾನವಿಲ್ಲದಿದ್ದರೂ ಅದು ಅಮ್ಮನಿಗೆ ಗೊತ್ತಾದದ್ದು ಹೇಗೆಂದು ತಿಳಿಯದ ವಿಶ್ವ ಸುಮ್ಮನೆ ಅಮ್ಮನ್ನ ನೋಡ್ತಾ ಇದ್ದ. "ಯಾರಿಗಾಗಿ ಓದ್ತಿಯ..? ಓದಿದ್ರೆ ನಿಂಗೆ ಮಾರ್ಕ್ಸ್ ಬರೋದು... ಹೀಗೆಲ್ಲ ನಾಟಕ ಯಾಕೆ ಆಡ್ತೀಯ...? ಓದೋದಾದ್ರೆ ಪುಸ್ತಕಾನ ಸರಿಯಾಗಿ ಇಟ್ಕೊಂಡ್ ಓದು.....ಸರಿ ಈಗ ತಿಂಡಿಗೆ ಬಾ...."ಟೀಚರ್ ಇರೋದೇ ತಾವು ಮಾರ್ಕ್ಸ್ ತೆಗೆಯದೆ ಇರದಂತೆ ನೋಡಿಕೊಳ್ಳ(ಲ್ಲ)ಲೆಂದು ಅಂತ ತಿಳಿದಿದ್ದ ವಿಶ್ವ ಯಾವತ್ತೂ ಮಾರ್ಕ್ಸ್ ಬಗ್ಗೆ ಯೋಚಿಸಿದವನಲ್ಲ. ಅಮ್ಮನ ಮಾತಿನಿಂದ ಹಿಡಿದ ಪುಸ್ತಕ ತಲೆಕೆಳಕಾಗಿದೆ ಎಂದು ತಿಳಿದ. ಹ್ಮ ಎಂದದ್ದು ಗಂಟಲಲ್ಲೇ ಉಳಿದರೂ ಇವನ ಉತ್ತರಕ್ಕೆ ಕಾಯದ ಅಮ್ಮ ಹೋಗಿಯಾಗಿತ್ತು.ಇನ್ನೂ ಎಷ್ಟೇ ಗಡಿಬಿಡಿಯಾದ್ರೂ ಪುಸ್ತಕಾನ ಸರಿಯಾಗಿ ಹಿಡಿಯಬೇಕು ಎಂದು ನಿರ್ದರಿಸಿ ಮತ್ತೆ ಕಿಟಕಿಯ ಬಳಿ ಹೋದ. ಕಿಟಕಿಯ ಕೊನೆಯ ಎರಡು ಉದ್ದನೆ ಸರಳುಗಳನ್ನು ತನ್ನೆರಡೂ ಕೈಗಳಿಂದ ಹಿಡಿದು, ಮಧ್ಯದೆರದು ಸರಳುಗಳ ನಡುವೆ ಮುಖ ಹುದುಗಿಸಿ ಮತ್ತೆ "ಶತಾಬ್ದಿ ಎಕ್ಸ್ ಪ್ರೆಸ್" ಗಾಗಿ ಕಾಯುತ್ತ ನಿಂತ ಅದರ ಬರುವಿಕೆಯ ದಿಕ್ಕನ್ನೇ ನೋಡುತ್ತಾ."ಶತಾಬ್ದಿ ಎಕ್ಸ್ ಪ್ರೆಸ್" ನ ಸಮಯ ಪಾಲನೆಯಲ್ಲಿ ನಂಬಿಕೆ ಇದ್ದ ವಿಶ್ವನಿಗೆ ಇವತ್ತು ತಿಂಡಿ ಬೇಗನೆ ಆಯಿತೆಂದೇ ಅನ್ನಿಸುತ್ತಿತ್ತು.ನಾಳೆಯಿಂದ ಸರಿಯಾಗಿ ಎಂಟು ಗಂಟೆಗೆ ತಿಂಡಿ ಮಾಡಲು ಹೇಳಬೇಕು ಎಂದು ಯೋಚಿಸುತ್ತಿರುವಾಗಲೇ ಕೂ...ಎಂದು ದೂರದಲ್ಲೆಲ್ಲೋ ರೈಲು ಕೂಗಿದ ಶಬ್ದ. ರೈಲು ಬರುವ ದಿಕ್ಕನ್ನು ಮತ್ತಷ್ಟು ಕುತೂಹಲದಿಂದ ನೋಡುತ್ತಾ ನಿಂತ. ಕಿಟಕಿಯ ಸರಳುಗಳ ನಡುವೆ ಮತ್ತಷ್ಟು ಜಾಗ ಇದ್ದಿದ್ರೆ ಬಹುಷಃ ಮುಖ ಹೊರಗೆ ಇರುತಿತ್ತೇನೋ. "ಶತಾಬ್ದಿ ಎಕ್ಸ್ ಪ್ರೆಸ್" ಎಂಥ ರೈಲು...! ಕೆಲವು ಸಲ ವಿಮಾನವನೂ ಹಿಂದೆ ಹಾಕುಹುದಂತೆ...! ಓ..ಬಂತು....ಹೋಯ್ತು....."ವಿಶ್ವ...ತಿಂಡಿ " ಮತ್ತೆ ಅಮ್ಮನ ಕೂಗು. ರೈಲು ಕಾಣುವವರೆಗೂ ಕಾಲು ನೀಗಿಕೊಂಡೆ ನೋಡಿದ್ದರಿಂದ ಪಾದ ನೋಯುತ್ತಿತ್ತು. ನಾಳೆ ಸ್ಟೂಲ್ ಹಾಕಿಕೊಂಡು ಕಾಲು ನೋವಾಗದಂತೆ ಅದರ ಮೇಲೇ ನಿಂತು ನೋಡಬೇಕೆಂದು ತೀರ್ಮಾನಿಸಿ ತಿಂಡಿಗಾಗಿ ಅಡಿಗೆ ಮನೆಯತ್ತ ಕಾಲೆಳೆದೆ.
            ತಿಂಡಿ  ತಿಂದು ಮತ್ತೆ ರೂಮಿಗೆ ಬಂದಾಗಲೇ ನೆನಪಾಗಿದ್ದು ಇಂಗ್ಲಿಷ್ ಹೋಂ ವರ್ಕ್ ಇನ್ನೂ ಆಗಿಲ್ಲ ಎಂದು.ಸೋಮವಾರದ ಶನಿ ವಿಶ್ವನನ್ನು ಬಿದುವಂತೆಯೇ ಇಲ್ಲಾ. ಎಲ್ಲ ದಿನಗಳಿಗಿಂತ ಹೆಚ್ಚು ದ್ವೇಷಿಸುವ ದಿನ ಅಂದ್ರೆ ಸೋಮವಾರ. ಭಾನುವಾರದ ಆಟ, ಸುತ್ತೋದು, ಟಿವಿ ಎಲ್ಲದರಿಂದ ಹೊರಬಂದು ಶಾಲೆಗೇ ಹೋಗಬೇಕಾದ ಕರ್ಮ.ಅದೂ ಹೋಂ ವರ್ಕ್ ಮುಗಿಸಿ... ಪ್ರತಿ ವಾರ ಭಾನುವಾರ ಅದ ಮೇಲೇ ಸೋಮವಾರ ಬರತ್ತೆ...ಥತ್...ಹದಿನೈದು ದಿನಗಳಿಗೊಮ್ಮೆ ಬರುವನ್ತಿದ್ದಿದ್ರೆ.....ಅರೆ...ಆಗ ಒಂದು ವಾರದಲ್ಲಿ ಆರೇ ದಿನ ಇರ್ತಿತ್ತು..ಮುಂದಿನವಾರ ಏಳು ದಿನ...ಆಂ! ಆರೇ ದಿನ ಇದ್ದ ವಾರದಲ್ಲಿ ನಾಲ್ಕು ದಿನಕ್ಕೊಮ್ಮೆ ಭಾನುವಾರ ಬರುವನ್ತಿದ್ದಿದ್ರೆ... ಸರಿಯಾಗ್ತಿತ್ತು...ಈ ವಾರ ಎರಡು ಭಾನುವಾರ ಸೇರಿ ವಾರಕ್ಕೆ ಏಳು ದಿನ...ಸೋಮವಾರ ಇಲ್ಲಾ...ಮುಂದಿನ ವಾರವೂ ಏಳು ದಿನ...ಒಂದೇ ಭಾನುವಾರ.. ಮತ್ತೊಂದು ಸೋಮವಾರ.. ಉಳಿದ ದಿನಗಳು ಎಂದಿನ ವಾರದಂತೆ..ಎಂದೆಲ್ಲ ಯೋಚಿಸುತ್ತಾ ಬೇಕಾಬಿಟ್ಟಿಯಾಗಿ ಟೇಬಲ್ ಮೇಲೆಲ್ಲಾ ಬಿದ್ದಿದ್ದ ಪುಸ್ತಕದ ರಾಶಿಯಿಂದ ಸರಿಯಾಗಿ ಇಂಗ್ಲಿಷ್ ಬುಕ್ ಮತ್ತು ನೋಟ್ಸ್ ತೆಗೆದು ಪೆನ್ಸಿಲ್ ಮೆಂಡ್ ಮಾಡಿ ಮಂಚದ ಮೇಲೇ ಕೂತ ಟೇಬಲ್ ಮೇಲೇ ಪುಸ್ತಕ ಇಟ್ಟು ಬರೆಯುವಷ್ಟು ಜಾಗವಿಲ್ಲದ್ದರಿಂದ. ಇದ್ದ ೧೨ ಪಾಠದಲ್ಲಿ ಯಾವುದು ಹೋಂ ವರ್ಕ್ ಗೆ ಕೊಟ್ಟಿದ್ದಾರೆಂದು ತಿಳಿಯದೆ.ಇದ್ದದ್ದರಲ್ಲೇ ಚಿಕ್ಕದಾದ 'jack and jill' ಬರೆಯಲು ಕುಳಿತ.ಅಜ್ಜಿಯ ಮನೆಯೂ ಹೀಗೆ...ಗುಡ್ಡದ ಮೇಲೇ...ಎಷ್ಟು ಚಂದ...ಕೆಲವೊಂದು ಸಲ ಮೋಡ ಮನೆ ಒಳಗೆ ಬರತ್ತೆ...ಆದ್ರೆ ಈ ಪದ್ಯದ ಉಲ್ಟಾ..ನೀರು ತರಲಿಕ್ಕೆ ಗುಡ್ಡ ಇಳಿದು ಕೆಳಗೆ ಬರಬೇಕು. ಮುಂದಿನ ತಿಂಗಳಿಂದ ಶಾಲೆಗೇ ರಜ..ಅಜ್ಜಿ ಊರಿಗೆ ಹೋಗಬೇಕು. ಎಷ್ಟು ಚಂದ ಮರ..ಗಿಡ...ಹಸಿರು....ಮನೆ ಮುಂದೆ ನಿಂತು ನೋಡಿದ್ರೆ ಊರೆಲ್ಲ ಚಿಕ್ಕದಾಗಿ ಕಾಣತ್ತೆ..ಆಹಾ..ಎಂದೆಲ್ಲ ಯೋಚಿಸುವಾಗ ಅಲ್ಲಿಗೆ ಶತಾಬ್ದಿ ಎಕಸ್ ಪ್ರೆಸ್  ಬರಲ್ಲ  ಎಂಬ  ಕೊರತೆ  ಕಾಣಿಸಿತು. ಎಂಥ ಹಳ್ಳಿ ಕೊಂಪೆ ಎಂಬ ಬೇಸರವೂ ಹುಟ್ಟಿತು.ಇಷ್ಟೆಲ್ಲಾ ಯೋಚಿಸುತ್ತ ಬರೆಯುವಾಗ ಮದ್ಯದ ಸಾಲು ಬಿಟ್ಟು ಕೊನೆ ಸಾಲು ಬರೆದು ಮುಗಿಸಿಯಾಗಿತ್ತು. ಥತ್...ಯಾವಾಗಲು ಈ ಲೈನ್ ಬಿಟ್ಟೆ ಬರೀತೀನಿ...  ಪ್ರತಿ ಸೋಮವಾರವೂ   ಇದೇ ಪದ್ಯ ಬರೆಯುತ್ತಿದ್ದರಿಂದ ಮೂರೇ ಲೈನಿಗೆ ಮುಗಿದಾಗ ಒಂದು ಸಾಲು ಬರೆದಿಲ್ಲವೆಂದು ಗೊತ್ತಾಗಿ , ಕೊನೆ ಸಾಲು ಅಳಿಸಿ ಮತ್ತೆ ಎರಡು ಸಾಲು ಬರೆದು ಮುಗಿಸಿದ. ಗಂಟೆ ೯ ಆಗಿದ್ದರಿಂದ ಯಾವ ಪುಸ್ತಕ ಬೇಕು, ಯಾವುದು  ಬೇಡ ಎಂದು ವರ್ಗೀಕರಿಸಲು ಸಮಯವಿಲ್ಲದೆ ಎಲ್ಲಾ ಪುಸ್ತಕಗಳನ್ನು ಚೀಲದಲ್ಲಿ ಇಳಿಸಿ , ಚೀಲವನ್ನು ಹೆಗಲಿಗೇರಿಸಿ ಹೊರಟ ಶಾಲೆಯೆಡೆಗೆ.           

ಮುದ್ದು ನನ್ನ ಪದ್ದು

ಥೂ! ಹುಡುಗಿ ಮುಂದೆ ಮರ್ಯಾದೆ ತೆಗೀತೀಯ...?  ಹುಡುಗರ ಮುಂದೆ, ಹುಡುಗಿಯರ ಮುಂದೆ ಎಲ್ಲ 'ನಮ್ಮ ಪದ್ಮಾವತಿ ಅಂಥೋಳು ಇಂಥೋಳು' ಅಂತ ಎಲ್ಲ ಹೇಳಿದ್ನಲ್ಲೇ...ಇವಳ ಮುಂದೆ ಕೂಡ ನಿನ್ನ ಹೊಗಳಿದೀನಿ ಕಣೇ...ಯಾಕೆ ಈ ತರ ಮಾಡ್ತೀಯಾ...? ನೋಡು... ಈಗ ಅರ್ಜೆಂಟ್ ಇದೆ ನನ್ನ ಹುಡುಗೀನ ರೈಲ್ವೆ ಸ್ಟೇಷನ್ ಗೆ ಬಿಡಬೇಕು...ಇನ್ನೂ ಬರಿ ಅರ್ದ ಗಂಟೆ ಇದೆ ರೈಲು ಹೊರಡೋಕೆ, ಈಗಲೇ ಯಾಕೆ ಹಠ ಮಾಡ್ತೀಯಾ.. ನಿಂಗೆ ಏನ್ ಬೇಕೋ ಅದ್ನೆಲ್ಲ ಕೊಟ್ಟಿದೀನಿ...ಆದರೂ ಸ್ಟಾರ್ಟ್ ಆಗಲ್ವೇನೆ...? ಅಬ್ಬ ಕಾಲೆಲ್ಲ ನೋಯ್ತಾ ಇದೆ ಕಿಕ್ ಒದ್ದು ಒದ್ದು...ಹಾಳಾದ್ ಬೈಕು (ಪದ್ಮಾವತಿ). ಅಲ್ಲ.. ಯಾವಾಗಲು ಒಂದೇ  ಕಿಕ್ ಗೆ ಸ್ಟಾರ್ಟ್  ಆಗ್ತಿತ್ತು .. ಇವತ್ತೇ ಕೈ ಕೊಡ್ತಾ ಇದೆ. ಪೆಟ್ರೋಲ್ ಇಲ್ವೇನೋ ಅಂತ ಅಲ್ಲಾಡಿಸಿ ನೋಡಿದೆ, ಸಾಕಷ್ಟಿದೆ. ನಿನ್ನೆ ತಾನೇ ೨ ಲೀಟರ್ ಹಾಕ್ಸಿದೀನಿ. ೪ ಕಿ.ಮಿ. ಗೆ ೨ ಲೀಟರ್  ಕುಡಿಯೋ  ಅಷ್ಟು ಎಣ್ಣೆ ಪಿಪಾಸು ಅಲ್ಲ ನನ್ನ ಪದ್ಮಾವತಿ. ಆದರೂ ಯಾಕೆ ಸ್ಟಾರ್ಟ್ ಆಗ್ತಾ ಇಲ್ಲಾ... ಅಬ್ಬಾ! ಹುಡುಗಿ ಮುಖ, ಕಣ್ಣು ಕೆಂಪ್ ಮಾಡ್ಕೊಂಡ್ ನೋಡ್ತಿದಾಳೆ...ಸ್ಟಾರ್ಟ್ ಆಗೇ... ಒಳ್ಳೆ ಮದುವೆ ದಿನಾ ಮದುಮಗಂಗೆ ಅತಿಸಾರ ಬೇದಿ ಕೆಣಕಿದ ಅನುಭವ. ನನ್ನ ಕಷ್ಟ ನೋಡಿದರೂ ನನ್ನ ಪದ್ಮಾವತಿಗೆ ಕನಿಕರನೆ ಬರ್ತಾ ಇಲ್ಲಾ... ಒಂದು ಕಡೆ ಕಿಕ್ ಒದ್ದು ಒದ್ದು ಕಾಲು ನೋವು, ಇನ್ನೊಂದ್ ಕಡೆ ಬಿಸಿಲಲ್ಲಿ  ಅರ್ಧ ಗಂಟೆಯಿಂದ ನಿಂತು ಬೆವರು ಇಳಿತಾ ಇದೆ, ಅದರ ಮಧ್ಯೆ ನನ್ನವಳ ನೋಟಕ್ಕೆ ಬೇರೆ x - ray ತೀಕ್ಷ್ಣತೆ ಬಂದಿದೆ. ಅವಳ ಕಣ್ಣಿನ ಬಾಣಾಗಳಿಂದ ತಪ್ಪಿಸಿಕೊಳ್ಳೋಕೋಸ್ಕರ ನನ್ನ ಮುಖ ಅವಳ ಕಡೆ ತಿರುಗ್ತಾನೆ ಇಲ್ಲಾ. ಅಯ್ಯೋ.. ಶರಣಾದೆ ಪದ್ಮಾವತಿ.. ಸ್ಟಾರ್ಟ್ ಅಗ್ಬಿದೆ.. ಪ್ಲೀಸ್... ಅಪ್ಪ ಶಿವ ಶಂಕರ ನನ್ನ ಗಾಡೀನ ಸ್ಟಾರ್ಟ್ ಮಾಡಪ್ಪ..ಲೇ..ಪದ್ಮಾವತಿ! ಸ್ಟಾರ್ಟ್ ಆಗ್ತೀಯೋ  ಇಲ್ವೋ... ಊಹುಂ..ವಜ್ರಮುನಿ ಸ್ಟೈಲ್ ನಲ್ ಹೇಳಿದ್ರು ಸ್ಟಾರ್ಟ್ ಆಗಲ್ಲ ಅಂತಾಳೆ. ಎನ್ಥೆನ್ಥೆ ಹೀರೋ ಗಳನ್ನೆಲ್ಲ ಹೆದರಿಸಿದ ವಜ್ರಮುನಿ ನನ್ನ ಪದ್ಮಾವತಿಯನ್ನ ಹೆದರಸ್ತ ಇಲ್ಲಾ. ಅಯ್ಯೋ ಪದ್ದು... ನನ್ನ ಹುಡುಗಿ ಎದುರಿಗೆ ನನ್ನ ಮಾನ ಕಾಪಾದೆ. ಎಷ್ಟು ಪರಿ ಪರಿಯಾಗಿ ಬೇಡಿಕೊಂಡರೂ ಸ್ಟಾರ್ಟ್ ಆಗ್ತಾ ಇಲ್ಲಾ. ನನ್ನ ಹುಡುಗಿ ರೈಲು ಬರೋ ಸಮಯ ಬೇರೆ ಆಯಿತು. ನನಗೆ ಗೊತ್ತಿದ್ದ, ಮತ್ತೆ ಸೇರಿಸಲು ಬರುವ ಎಲ್ಲ  ವೈರ್ ಗಳನ್ನೂ ತೆಗೆದು ಮತ್ತೆ ಜೋಡಿಸಿ ಕಿಕ್ ಒದ್ದೆ.. ಊಹುಂ.. ಇಲ್ಲಾ.. ಡುರ್ ಎಂದು ಶಬ್ದ ಮಾಡಿ ಸುಮ್ಮನಾಗಿ ಬಿಟ್ಲು ಪದ್ಮಾವತಿ. ಈ ಪೆಟ್ರೋಲ್ ಪೈಪ್ ತೆಗೆದು ನೋಡಿದೆ.. ೨ ರೂ ಗಳಷ್ಟು ಪೆಟ್ರೋಲ್ ನೆಲದ ಪಾಲಾದ ಮೇಲೇ ತಿಳೀತು ಪೆಟ್ರೋಲ್ ಇದೆ ಮತ್ತು ಅದು ಎಂಜಿನ್ ಗೆ ಬರ್ತಾ ಇದೆ. ಮತ್ತೇನ್ ದಾಡಿ ನನ್ ಪದ್ಮಾವತಿಗೆ ಸ್ಟಾರ್ಟ್ ಆಗಕ್ಕೆ...? ಅದೇನೋ ಕಾರ್ಬೋರೆಟಾರ್ ಅಂತಾರಲ್ಲ ತೆಗೆದು, ಹಾಕಿ, ಮತ್ತೆ ಒದ್ದು ನೋಡಿದ್ರೂ ಸ್ಟಾರ್ಟ್ ಆಗ್ತಾ ಇಲ್ಲಾ.. 
-----------------------------------------------------------------------------------------------------------------------------------------------------------------------------------------------------------------------
ಅಬ್ಬ.. ಅಂತೂ ನನ್ ಹುಡುಗಿ ಟ್ರೈನ್ ಸಿಗ್ತು. ಅವಳನ್ನ ಟ್ರೈನ್ ಸೀಟ್ ನಲ್ಲಿ ಕೂರಿಸಿ ರೈಲು ಹೊರಡುವವರೆಗೂ ಅಲ್ಲೆ ಇದ್ದು ಟಾಟಾ ಮಾಡಿ ಬಂದು ಮತ್ತೆ ಪದ್ಮವತಿಯೊಂದಿಗೆ ಮನೆ ಕಡೆ ಹೊರಟೆ . 
ಓ ನನ್ ಹುಡುಗಿನ ಹೇಗೆ ರೈಲಿಗೆ ಬಿಟ್ಟೆ ಅಂತಾನ...? ಅದ್ನೇನ್ ಕೇಳ್ತೀರಾ... ಆಗ್ಲೇ ಹೇಳಿದ್ನಲ.. ನನ್ನ ಪದ್ಮಾವತಿ ನಂಗೆ ಕೈ ಕೊಡಲ್ಲ ಅಂತ..ಹೌದು  ಕಣ್ರೀ.. ನನ್ನ ಪದ್ಮಾವತಿ ನನ್ನ ಯಾವತ್ತು ಅರ್ಧ ದಾರೀಲೆ ಕೈ ಬಿಟ್ಟಿದ್ದೆ ಇಲ್ಲಾ... ಓ.. ಏನಂದ್ರಿ...?  ಹೆಂಗೆ ಸ್ಟಾರ್ಟ್ ಆಯಿತು ಅಂತಾನ...? ಅದೇನಿಲ್ಲ ಕಣ್ರೀ... ಕೀ ಆನ್ ಮಾಡಿ ಕಿಕ್ ಒದ್ದೆ ನೋಡಿ... ಪಾಪ ಪದ್ದು ಸ್ಟಾರ್ಟ್ ಆಗೆ ಬಿಟ್ಲು. 

ವಿ.ಸೂ. 25 ಜನವರಿ 2011ರಂದು ಉದಯವಾಣಿ ಯ ಪುರವಣಿ 'ಜೋಶ್' ನಲ್ಲಿ ಪ್ರಕಟವಾದ ಲೇಖನ.