ಹಣ್ಣೆಲೆ ಉದುರುವಾಗ

ಏನೇ ಹೇಳಿ, ಇಷ್ಟು ವರ್ಷ ಬದುಕಿರಬಾರದು ಕಣ್ರಿ, ವಯಸ್ಸಾಗೋಕು ಮುಂಚೆ ಸತ್ತುಬಿಡಬೆಕು’ ಎಂಬ ಯೋಚನೆ ಆ ಹಣ್ಣೆಲೆಗೆ ಬಂದು ಆಗಲೆ ಮೂರು-ನಾಲ್ಕು ದಿನಗಳಾಗಿತ್ತು. ಶರಾವತಿಯ ತಟದಲ್ಲಿರೋ ಒಂದು ಬನ್ನಿ ಮರ, ಆ ಮರದ ರಾಶಿ,ರಾಶಿ ಎಲೆಗಳ ಮದ್ಯೆ ಚಿಗುರಿದ ಆ ಎಲೆಗೆ ಏನೋ ಸಂಭ್ರಮ. ಅದರ ಬಾಲ್ಯದ ದಿನಗಳು ಇನ್ನೂ ಕಣ್ಣಿಗೆ ಕಟ್ಟುವಂತಿದ್ದರೂ ಹನಿಗಳು ತುಂಬಿ ಮಂಜಾದ ಕಣ್ಣಿನಲ್ಲಿ ಕೆಲ ನೆನಪುಗಳು ಅಸ್ಪಷ್ಟ. ಮರದ ಮೂಲೆಯಲ್ಲೆಲ್ಲೋ ಕುಳಿತರೂ ಶರಾವತಿಯ ಬಳುಕಿನ ನಡಿಗೆ ಸ್ಪಷ್ಟವಾಗಿ ಕಾಣುತ್ತಿತ್ತು. ದಿನ ತೆಪ್ಪ ದಾಟಿ ಹೋಗುವ ಶಾಲೆಯ ಹುಡುಗರು, ಗುದ್ದಲಿ ಹೊತ್ತು ಬರುವ ಕೆಲಸದವರು, ನೀರು ಕುಡಿಯಲು ಬರುವ ದನ-ಕರುಗಳು, ನೀರಿನಾಳಕ್ಕೆ ಬಲೆ ಬೀಸಿ ಮೀನು ಹಿಡಿಯುವ ಬೆಸ್ತರು, ಬಲೆಗೆ ಸಿಗುವವರೆಗೂ ಸಂಪೂರ್ಣ ಸ್ವಾತಂತ್ರ್ಯ ಅನುಭವಿಸುವ ಮೀನುಗಳು, ಗೂಡಿನಿಂದ ಹೊರ ಇಣುಕಿದ ಏಡಿಗಳು. ಎಲ್ಲವೂ ನೆನಪಿದೆ... ಬೇಸಿಗೆಯ ಸೊರಗಿದ ಶರಾವತಿಯ ಕಂಡು ಮರುಗಿದ ಮನಸ್ಸು, ಹೆದರಿಕೆ ಹುಟ್ಟಿಸಿದ ಮಳೆಗಾಲದ ಅವಳ ರಭಸ. ಇನ್ನೂ ನೆನಪಿದೆ... ಯೌವನದಲ್ಲಿನ ಆ ಹುರುಪು, ಇಡೀ ಮರಕ್ಕೆ ಬೇಕಾಗುವಷ್ಟು ಆಹಾರ ನಾನೊಬ್ಬನೇ ತಯಾರಿಸಬಲ್ಲೆನೆಂಬ ಉತ್ಸಾಹ, ಮರದ ಜೀವಂತಿಕೆಗೆ ನಾನೇ ಬೇಕೆಂಬ ಅಹಂಕಾರ, ಭೂಮಿಯ ಸಾರವನ್ನೆಲ್ಲ ಹೀರಿಸಿ ಮರ ಬೆಳಸಿಬಿಡುವೆನೆಂಬ ಹುಂಬತನ. ಆದರೆ ಈಗೆಲ್ಲಿ ಹೋಯಿತು ಆ ಶಕ್ತಿ, ಆ ಉತ್ಸಾಹ, ಆ ಬಂಡತನ..? ಇನ್ನೇನು ಉದುರುವ ’ಹಣ್ಣೆಲೆ’ ಎಂದ ಮಾತ್ರಕ್ಕೆ ಉತ್ಸಾಹವೇಕೆ ಕುಗ್ಗಬೇಕು..? ಕುಗ್ಗದೆ ಇನ್ನೇನು..! ಈ ಇಳಿ ವಯಸ್ಸಿನಲ್ಲಿ ಬಂದ ದಾರಿ ತಿರುಗಿ ನೋಡಿದರೆ ಜೀವನದ ಸಾರ್ಥಕತೆ ಕಾಣುತ್ತಿಲ್ಲ. ನಾನಿದ್ದರೂ, ಇರದಿದ್ದರೂ ಈ ಮರದಲ್ಲೇನು ಬದಲಾವಣೆಯಿಲ್ಲ. ಶಕ್ತಿ ಇರುವವರೆಗೂ ಆಹಾರ ತಯಾರಿಸಿದೆ, ಈಗ ಶಕ್ತಿಹೀನನಾಗಿ ಉದುರುವ ಭಯದಲ್ಲಿದ್ದೇನೆ. ಹುಟ್ಟಿನಿಂದ ಇಲ್ಲಿಯವರೆಗೂ ಈ ಮರಕ್ಕಾಗಿ ದುಡಿದೆ. ಆದರೆ ಈಗ..? ಉದುರುವ ಕಾಲದಲ್ಲಿ ನನಗಾಗಿ ಕಂಬನಿ ಮಿಡಿಯುವವರಿಲ್ಲ. ನಾನಿನ್ನೂ ಇದ್ದೀನ, ಉದುರಿಹೋಗಿದ್ದೀನ ಎಂಬುದೇ ಈ ಮರಕ್ಕೆ ಗೊತ್ತಿರಲಿಕ್ಕಿಲ್ಲ. ಒಂದೊಮ್ಮೆ ಗೊತ್ತಿದ್ದರೂ ನನಗಾಗಿ ಏನನ್ನೂ ಮಾಡುವ ಸ್ಥಿತಿಯಲ್ಲಿಲ್ಲ. ಈ ಅಸಂಖ್ಯ ಜೊತೆಗಾರರ ಮಧ್ಯೆಯೂ ಒಂಟಿತನ ಕಾಡುತ್ತಿದೆ. ಇಲ್ಲಿ ಯಾರೂ ಯಾರಿಗೂ ಅಲ್ಲ, ಇಲ್ಲಿರುವವರೆಲ್ಲ ತನ್ನವರಲ್ಲವೆಂಬ ಅನಾಥ ಪ್ರಜ್ನೆ ಕಾಡುತ್ತಿದೆ.ಮಾಗಿಯ ಚಳಿಯಲ್ಲಿ ಮಾಗಿದ ಎಲೆಯಾಗಿ ಉದುರುವೆ. ತಣ್ಣನೆಯ ಗಾಳಿ ಬೀಸಿದಾಗ ಮೈಯೊಡ್ಡುವ ಮನಸ್ಸಿಲ್ಲ. ಮನಸ್ಸಿನಲ್ಲೆಲ್ಲ ಭಯ..! ಗಾಳಿಯೊಡನೆ ಉದುರಿಯೇನೆ..? ಬಹುಶಃ ಈಗ ನೋಡುತ್ತಿರುವ ಸೂರ್ಯಾಸ್ತವೆ ಕೊನೆಯದಿರಬಹುದು ನನ್ನ ಪಾಲಿಗೆ. ಬೆಳಗ್ಗೆ ಏಳುವ ಸೂರ್ಯನನ್ನು ನೋಡಿಯೇನೆಂಬ ನಂಬಿಕೆಯಿಲ್ಲ.
ರಾತ್ರಿಯಿಡೀ ಆ ಎಲೆಗೆ ನಿದ್ರೆಯಿಲ್ಲ. ಚಳಿಗೆ ಮುದುಡಿ ಕುಳಿತರೂ ಮೈ ಬೆವರುತ್ತಿದೆ. ಸಾವಿನ ಭಯ. ಬಹುಶಃ ಬರಿ ಸಾವಿನ ಭಯವಲ್ಲ. ಜೀವನದಲ್ಲಿ ಬೇರೆಯವರಿಗೋಸ್ಕರವೇ ನಿಸ್ಸ್ವಾರ್ಥವಾಗಿ ದುಡಿದರೂ ಗುರುತಿಸಲ್ಪಡಲಿಲ್ಲ ಎಂಬ ವ್ಯಥೆ, ತನ್ನವರೆಂದು ತೋರುವವರ್ಯಾರೂ ತನ್ನವರಲ್ಲವೆಂಬ ಅನಾಥ ಭಾವ, ಜೀವನದ ಇಳೆಯಲ್ಲಿ ಕಾಣದ ಬದುಕಿನ ಸಾರ್ಥಕತೆ, ತನ್ನ ಅಸ್ಥಿತ್ವದ ಅರಿವೇ ಇಲ್ಲದಂತೆ ಸಾಗುವ ಪ್ರಪಂಚ, ತಾನಿದ್ದರೂ, ಇರದಿದ್ದರೂ ಇಲ್ಲೆಲ್ಲವೂ ಇರುವಂತೆಯೆ ಇರುತ್ತದೆನ್ನುವ ಸತ್ಯ. ಇವೆಲ್ಲವೂ ಮೈ ಬೆವರಿಸುವ ಸಂಗತಿಗಳು.
ಬೆಳಗ್ಗೆ ಏಳುವಷ್ಟರಲ್ಲಿ ಎಲ್ಲವೂ ಇದ್ದಂತೆಯೇ ಇದೆ. ದಿನದಂತೆ ಹೋಗುವ ಶಾಲೆಯ ಅದೇ ಹುಡುಗರು, ಕೆಲಸಗಾರರು, ಈಜಾಡುವ ಮೀನು, ಇಣುಕುವ ಏಡಿ. ಎಲ್ಲವೂ ಎಂದಿನಂತೆ. ಪೂರ್ವದಲ್ಲಿ ಉದಯಿಸಿದ ಸೂರ್ಯ, ಹಕ್ಕಿಗಳ ಕಲರವ, ಸೂರ್ಯರಶ್ಮಿಗೆ ಬೆಂದು ಆವಿಯಾದ ಇಬ್ಬನಿ.  ಅರೆ.. ಈ ಇಬ್ಬನಿಯ ಆಯಸ್ಸು ಕೇವಲ ಎರಡು  ಗಂಟೆಗಳು. ಆ ಅಲ್ಪಾವಧಿಯಲ್ಲೆ ಸೂರ್ಯನ ಬಿಸಿಲನ್ನು ನುಂಗಿ ಮುತ್ತಿನಂತೆ ಹೊಳೆಯುತ್ತದೆ. ಅದೇ ವೇಗದಲ್ಲಿ ಮಾಯವಾಗುತ್ತದೆ. ಎರಡೇ ಗಂಟೆಯಲ್ಲಿ ಮಿಂಚಿ ಮತ್ತೆ ಮರೆಯಾಗಿ ಸಾರ್ಥಕತೆ ಕಾಣುತ್ತದೆ. ನಾನಿನ್ನು ಉತ್ಸಾಹಹೀನನಾಗುವ ಅಗತ್ಯವಿಲ್ಲ. ಮರದ ಈ ಆಕಾರಕ್ಕೆ ಇಷ್ಟು ದಿನ ನಾ ಕೊಟ್ಟ ಆಹಾರವೂ ಬೇಕಾಗಿದೆ, ಇದ್ದಷ್ಟು ದಿನ ಈ ಮರಕ್ಕೆ ಜೀವ ನೀಡಿದ್ದೇನೆ, ನನ್ನ ಹಸಿರಿನಿಂದ ಮರದ ಅಂದ ಹೆಚ್ಚಿಸಿದ್ದೇನೆ, ಬಳಲಿ ಬಂದವರಿಗೆ ನೆರಳಾಗಿದ್ದೇನೆ. ಇದೂ ಕೂಡ ಸಾರ್ಥಕತೆಯಲ್ಲವೆ..! ಇನ್ನು ಶರಾವತಿಯಲ್ಲಿ ಲೀನವಾದರೂ ಚಿಂತೆಯಿಲ್ಲ.
ಸಣ್ಣ ಗಾಳಿಯ ಹೊಡೆತ ಜೋರಾದಂತೆ ನಿಲ್ಲಲೂ ನಿತ್ರಾಣವಾಗಿದ್ದ ಎಲೆ ಶರಾವತಿಯ ಮಡಿಲಲ್ಲಿ ಲೀನವಾಯಿತು.

ಹಳೇ ಗಾಯ.. ಹೊಸ ಕೆರೆತ

ಯಾಕೊ ಭಯಂಕರ ಬೇಜಾರು. ಹೊಸ ಪ್ಯಾಂಟು ಹರಿದಾಗ, ಹಳೆ ಹುಡುಗಿ ನೆನಪಾದಾಗ ಇಂಥ ಬೇಜಾರು ಆಗೋದು ಸಹಜ. ಸದ್ಯಕ್ಕೆ ಹೊಸ ಪ್ಯಾಂಟ್ ತಗೋಂಡಿಲ್ಲ, ಹಳೇ ಹುಡುಗಿ ನೆನಪು ಕಾಡ್ತಾ ಇದೆ. ಗಾಯ ಹಳೇದೆ, ಕೆರೆತ ಹೊಸಾದು. ಸುತ್ತ-ಮುತ್ತ ಎಷ್ಟು ಜನ ಇದ್ರೂ ತೀರಾ ಒಂಟಿತನ ಕಾಡಿಬಿಡತ್ತೆ ಮನಸ್ಸಿನ ಪುಟವ ತಿರುವಿ ಹಾಕಿದಾಗ. ನೆನಪಿನ ಕಪಾಟಿನ ಕೀಲಿ ಕೈ ಸಿಗದಂತೆ ದೂರ ಎಸೆದರೂ ಮತ್ತೆ ಮತ್ತೆ ಸಿಗುತ್ತಿದೆ. ಏನು ಮಾಡೋಣ ಕೀಲಿಕೈನ..! ಅವಾಗಾವಾಗ ಅನ್ಸತ್ತೆ, ಮನುಷ್ಯಂಗೆ ಬುದ್ಧಿ ಕಡಿಮೆ ಅಂತ. ಈಗಿನ್ನೂ ಇಟ್ಟ ಕೀ ನ ಮರೀತಾನೆ, ಎಲ್ಲಿಟ್ಟೆ ಅಂತ. ಕೊಟ್ಟ ಕೈನ ನೆನಪಲ್ಲೇ ಇಟ್ಕೊಂಡು ಕೊರಗಿ, ಕೊಳೀತಾನೆ, ಸಾಯೋತಂಕ. ಈಗ ನಂಗೆ ಆಗಿದ್ದೂ ಅದೆ. ಮರೆಯಲೇಬೇಕಾದ ಸಂಗತಿಗಳು ಮರೆವ ಪ್ರಯತ್ನಕ್ಕೆ ಸವಾಲೆಸೆದು, ಮತ್ತೆ ಮತ್ತೆ ರಾಕ್ಷಸತ್ವ ಪಡೆದು ಬೆನ್ನಿಗೆ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಹಳೇ ಹುಡುಗಿಗೆ ಹೇಳಲೇಬೇಕಾದ ಹೊಸ ಮಾತುಗಳಿವೆ.
ನಾನು ನನ್ನನ್ನ ಇಷ್ಟಪಟ್ಟಷ್ಟು ನನ್ನ ಯಾರೂ ಇಷ್ಟಪಟ್ಟಿಲ್ಲ. ನಾನು ನನ್ನನ್ನ ಇಷ್ಟಪಟ್ಟಷ್ಟು ನಾನೂ ಯಾರನ್ನೂ ಇಷ್ಟಪಟ್ಟಿರಲಿಲ್ಲ. ನೀನು ಸಿಕ್ಕಿದೆ ಕಣೆ. ನೋಡಿದ ಕೂಡಲೆ ಎದೆಯಲ್ಲಿ ಯಾವುದೋ ಸ್ವಿಚ್ಚು ಅದುಮಿದಂಗಾಯ್ತು. ಕೊನೆಗೂ ಕರೆಂಟ್ ಬರ್ಲಿಲ್ಲ ಅನ್ನೋದು ಬೇರೆ ವಿಚಾರ. ಮೊದಲ ನೋಟಕ್ಕೇ ಪ್ರೀತಿ ಮೊಳಕೆ ಒಡೀತು. ಬರಿ ಮೊಳಕೆ ಒಡೆಯೋದೇನು, ಹೆಮ್ಮರವಾಗಿ ಹೂವನ್ನೇ ಬಿಡ್ತು. ಇನ್ನೂ ಅದೇ ಹೂವಿದೆ ಕಿವೀಲಿ. ನಮ್ಮ ಕ್ಲಾಸಲ್ಲೇ ’ಕ್ಲಾಸ್’ ಆಗಿದ್ದ ಹುಡುಗಿ ನೀನು, ನಿಂಗೆ ಮನಸ್ಸು ಕೊಟ್ಟೆ, ನೀನು ನಂಗೆ ಕೈ ಕೊಟ್ಟೆ. ಅದ್ಭುತ ಎಕ್ಸಚೇಂಜ್ ಆಫರ್..! ನಿನ್ನ ನೋಡಬೇಕು ಅಂತಾನೆ ಕಾಲೇಜಿಗೆ ಬರ್ತಾ ಇದ್ದೆ. ಹಂಗೆ ಬಂದಿದ್ರಿಂದ ನನ್ನ ಮನಸ್ಸು ಇನ್ನೂ ಗ್ಯಾರೇಜ್ ನಲ್ಲೇ ಇದೆ. ನೀನು ಕಾರಣ ಹೇಳಿ ಹೋಗಿದ್ರೆ ಬೇಜಾರು ಆಗ್ತಿರ್ಲಿಲ್ವೇನೊ. ಹೇಳದೆ ಹೋದ್ಯಲ್ಲ ಅದು ಬೇಜಾರು. ನಿಂಗೆ ಅಂತ ಹೇಳಿದ ಮಾತು ನೆನಪಿದ್ಯಾ..? ಸಾವಿರ ಸಲ ಹೇಳಿದ ಮಾತು..!
                   ಹೇಳಿಬಿಡು ಒಮ್ಮೆ ನೀ ನನಗಲ್ಲವೆಂದು
                   ಬದಲಿಸಿ ಬಿಡುವೆ ಆ ಬ್ರಹ್ಮನ ಹಣೆಬರಹವನ್ನು
ಅಂತ. ಬ್ರಹ್ಮ ಹಣೆಯಲ್ಲಿ ಬೇರೆ ಬರ್ದಿದ್ರೆ ಅಳಿಸಿ ನಿನ್ನ ಹೆಸರನ್ನೆ ಬರಿಬಹುದಿತ್ತೇನೋ..!
                   ನಿನ್ನೆದೆಯಲಿ ಬರೆಯದೆ ನನ್ಹೆಸರ
                   ಇಂಗಿಸಿ ಬಿಟ್ಟೆಯ ನನ್ನುಸಿರ...?
ಕ್ಲಾಸಲ್ಲಿ ನಿನ್ನ ಕದ್ದು, ಕದ್ದು ನೋಡೋದು, ಕೆಟ್ಟದಾಗಿ ಬರ್ದಿರೊ ನಿನ್ನ ನೋಟ್ಸ್, ರೆಕಾರ್ಡ್ ನ ಇಸ್ಕಳೋದು, ನಿನ್ನ ಹಾಸ್ಟೆಲ್ ಕಿಟಕೀನ ನಿನಗಾಗಿ ನೋಡೋದು, ಪುಸ್ತಕದ ಕೊನೆ ಪುಟದಲ್ಲಿ ನಿನ್ನದೇ ಹೆಸರು ಗೀಚೋದು, ಬೆಂಚಿನ ಮೇಲೆ ಕೆತ್ತೋದು ಮುಂತಾದ ಹಲವು ಪ್ರೀತಿಯ ಲಕ್ಷಣಗಳನ್ನ ತೋರಿಸಿದೆ, ಎಲ್ಲಾ ಹುಡುಗರಂತೆ. ನೀನು ಅದನ್ನೆಲ್ಲ ನಿರ್ಲಕ್ಷಿಸಿದೆ, ಎಲ್ಲ ಹುಡುಗಿಯರಂತೆ. ತೀರಾ ಪ್ರೀತಿ-ಗೀತಿ ಅಂತ ಮಾಡೋಕು ಮುಂಚೆ ನಿನ್ನ ಕೇಳಬೇಕಿತ್ತು ಕಣೆ
                   ಬಿಡಿಸಿ ಹೇಳಲಾರೆಯ ನನಗೂ-ನಿನಗೂ ನಂಟೇನು
                   ನೀನಿನ್ನು ನನಗೆ ಕನ್ನಡಿ ಒಳಗಿನ ಗಂಟೇನು

ಅವತ್ತು ಕೇಳ್ಳಿಲ್ಲ. ಇವತ್ತು ಅನುಭವಿಸ್ತ ಇದೀನಿ. ನೀ ಹೋದಾಗಿಂದ ’ದೇವದಾಸ’ ಮನೆದೇವರು ಅಗ್ಬಿಟ್ಟಿದಾನೆ. ಅಂದಿನಿಂದ ನಂಗೆ ನನ್ನನ್ನೂ ಇಷ್ಟಪಡೋಕೆ ಆಗ್ತಾ ಇಲ್ಲ. ಈಗ್ಲಾದ್ರು ಬರ್ತೀಯ, ಕಾದು ಕಾದು ಕೆಂಪಾಗಿದೀನಿ..?